ವಿಧಾನಸಭೆ: ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 2,586 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿವೆ. 559 ವೈದ್ಯರ ಕೊರತೆಯಿದೆ. ಆರ್ಥಿಕ ಇಲಾಖೆ ಅನುಮತಿ ಪಡೆದು ಮುಂದಿನ 6 ತಿಂಗಳಲ್ಲಿ ಕೆಪಿಎಸ್ಸಿ ಮೂಲಕ 331 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಿಸಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಇದರ ಜತೆಗೆ ಗುತ್ತಿಗೆ ವೈದ್ಯರು ಹಾಗೂ ಕಾಯಂ ವೈದ್ಯರ ಸಂಬಂಳವನ್ನು ಕ್ರಮವಾಗಿ ರೂ.40 ಸಾವಿರ ಹಾಗೂ ರೂ.75ಸಾವಿರಕ್ಕೆ ಏರಿಸುವಂತೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಕಳುಹಿಸಿ 6 ತಿಂಗಳಾಯಿತು.
ಆರ್ಥಿಕ ಇಲಾಖೆಯ ನಿರ್ಧಾರ ತಿಳಿದ ಬಳಿಕ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ 983 ತಜ್ಞ ವೈದ್ಯರು, 559 ಸಾಮಾನ್ಯ ಕರ್ತವ್ಯ ವೈದ್ಯರು ಸೇರಿದಂತೆ 3507 ಹುದ್ದೆಗಳಿಗೆ ಹಂತಹಂತವಾಗಿ ನೇಮಕ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಇದನ್ನು ಹೊರತುಪಡಿಸಿ ಇಲಾಖೆಯಲ್ಲಿ ನಾನಾ ವೃಂದದಲ್ಲಿ 10,928 ಹುದ್ದೆಗಳು ಖಾಲಿಯಿವೆ. ಆರ್ಥಿಕ ಇಲಾಖೆ ಅನುಮತಿ ಪಡೆದು ನೇಮಿಸುವುದಾಗಿ ಬಿ.ಎಂ.ನಾಗರಾಜ ಅವರ ಚುಕ್ಕೆ ರಹಿತ ಪ್ರಶ್ನೆಗೆ ಸಚಿವ ಖಾದರ್ ಉತ್ತರಿಸಿದರು.
ರಾಜ್ಯದಲ್ಲಿ ಎಬೊಲಾ ಕಾಯಿಲೆಯಿಲ್ಲ
ರಾಜ್ಯದಲ್ಲಿ ಇವತ್ತಿನವರೆಗೆ ಎಬೊಲಾ ಕಾಯಿಲೆ ಸೋಂಕು ಹೊಂದಿದ ರೋಗಿಗಳ ಪತ್ತೆಯಾಗಿಲ್ಲ. ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಿರಂತರವಾಗಿ ಪ್ರಯಾಣಿಕರ ಪರೀಕ್ಷೆ ಮಾಡಲಾಗುತ್ತಿದೆ ಎಂದು ಬಿಜೆಪಿಯ ಆರ್.ಅಶೋಕ್ ಅವರ ಪ್ರಶ್ನಗೆ ಆರೋಗ್ಯ ಸಚಿವರು ಉತ್ತರಿಸಿದ್ದಾರೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟು 1770 ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಆಫ್ರಿಕಾ ದೇಶಗಳಿಂದ ಬರುತ್ತಿರುವ ವಿಮಾನ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸದನಕ್ಕೆ ಅವರು ಮಾಹಿತಿ ಪಡೆದರು.
Advertisement