
ಬೆಂಗಳೂರು: ಬಹಿರಂಗ ಮುತ್ತು, ಕೊಟ್ಟವರಿಗೆ ಆಪತ್ತು ಎಂಬುದು ಕಡೆಗೂ ಸರ್ಕಾರಕ್ಕೆ ಅರಿವಾಗಿದೆ. ವಿವಾದ ಶುರುವಾಗಿ ಇಷ್ಟು ದಿನಗಳಾದ ಬಳಿಕ, ಬಹಿರಂಗವಾಗಿ ಮುತ್ತು ಕೊಟ್ಟರೆ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬುದೂ ಗೊತ್ತಾಗಿದೆ, ಹೀಗಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಮೂಲಕ ಕಿಸ್ ಆಫ್ ಲವ್ಗೆ ಅವಕಾಶವಿಲ್ಲ ಎಂದು ಹೇಳಿಸಿ, ನವೆಂಬರ್ 30ರ ಮುತ್ತಿನ ವಿವಾದಕ್ಕೆ ಇತಿಶ್ರೀ ಹಾಡಿದೆ.
ಕಾನೂನು ಭಂಗ: ಕಿಸ್ ಆಫ್ ಲವ್ನಿಂದಾಗಿ ಕೇರಳ, ದೇಹಲಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿತ್ತು. ಬೆಂಗಳೂರಿನಲ್ಲಿ ಕಿಸ್ ಆಫ್ ಲವ್ಗೆ ಅವಕಾಶ ನೀಡಲ್ಲ ಎಂದು ಕೆಲ ಸಂಘಟನೆಗಳು ಹೇಳಿದ್ದವು. ಸಾರ್ವಜನಿಕರಷ್ಟೇ ಅಲ್ಲ, ಕೆಲ ಕಾಂಗ್ರೆಸ್ ನಾಯಕರೂ ಇದರ ವಿರುದ್ಧ ಮಾತನಾಡಿದ್ದರು. ಹೀಗಾಗಿ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಅವಕಾಶ ನಿರಾಕರಿಸಲಾಗಿದೆ.
ಎಂಎನ್ ರೆಡ್ಡಿ ಹೇಳಿದ್ದಿಷ್ಟು
ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲವಾಗಿ ಅಥವಾ ಕೆಟ್ಟದಾಗಿ ವರ್ತಿಸುವುದು ಐಪಿಸಿ ಕಲಂ 394 (ಎ) ಅನ್ವಯ ಅಪರಾಧ.
ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಬಂದಾಗ 'ಕರ್ನಾಟಕ ಪೊಲೀಸ್ ಕಾಯ್ದೆ 65ಡಿ' ಅನ್ವಯ ತಡೆಗೆ ಅವಕಾಶವಿದೆ.
ಮಾನವಹಕ್ಕುಗಳ ಹೊರಾಚಗಾರ್ತಿ ರಚಿತಾ ತನೇಜಾರಿಂದ ಕಿಸ್ ಆಫ್ ಲವ್ ಆಂದೋಲನಕ್ಕೆ ಅವಕಾಶ ಕೋರಿ ಕೇಂದ್ರ ವಿಭಾಗ ಡಿಸಿಪಿಗೆ ಮನವಿ.
ಮನವಿ ಪತ್ರದಲ್ಲಿ ಆಂದೋಲನದ ಸ್ವರೂಪದ ಬಗ್ಗೆ ಸ್ಪಷ್ಟತೆ ಇರಲಿಲ್ಲ.
ಮತ್ತೊಮ್ಮೆ ಎಲ್ಲ ಮಾಹಿತಿಯೊಂದಿಗೆ ಬನ್ನಿ ಎಂದು ತಿಳಿಸಲಾಗಿತ್ತು.
2ನೇ ಬಾರಿಯೂ ಅವರು ಸೂಕ್ತ ಮಾಹಿತಿ ನೀಡಲಿಲ್ಲ.
ಆಂದೋಲನದ ಸ್ವರೂಪ, ಎಷ್ಟು ಜನ ಭಾಗವಹಿಸುತ್ತಾರೆ, ಯಾರ ನೇತೃತ್ವ, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಅದರ ಜವಾಬ್ದಾರಿ ಯಾರದು ಎಂಬ ಪ್ರಶ್ನೆಗಳಿಗೆ ಉತ್ತರವಿಲ್ಲ.
ಕಾರ್ಯಕ್ರಮದ ಬಗ್ಗೆ ಸೋಷಿಯಲ್ ಜಾಲತಾಣಗಳಲ್ಲೂ ಪ್ರಚಾರ, ಹೀಗಾಗಿ ಹೆಚ್ಚು ಜನ ಬರಬಹುದು, ಏನಾದರೂ ಆಗಬಹುದು ಎಂಬ ಉತ್ತರ ರಚಿತಾರಿಂದ ಬಂದಿತ್ತು.
ಹೀಗಾಗಿ ಅರ್ಜಿ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಅನುಮತಿ ನಿರಾಕರಣೆ.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಹಿನ್ನಲೆಯಲ್ಲಿ ಕಿಸ್ ಆಫ್ ಲವ್ಗೆ ಅನುಮತಿ ನೀಡಿಲ್ಲ.
-ಎಂಎನ್ ರೆಡ್ಡಿ, ಪೊಲೀಸ್ ಆಯುಕ್ತ
ಹಿಂದೆ ಸರಿದ ರಚಿತಾ!
ಪಕ್ಷಾತೀತ ವಿರೋಧ ವ್ಯಕ್ತವಾಗಿರುವ ಕಿಸ್ ಆಫ್ ಲವ್ ವೇಳೆ ಗಲಾಟೆ ಸಂಭವಿಸಿದರೆ, ಮಾಧ್ಯಮಗಳಲ್ಲಿ ಹೈಲೈಟ್ ಆಗಿರುವ ತನ್ನ ಮೇಲೆ ಕೇಸ್ ಹಾಕಿ ಪೊಲೀಸರು ಬಂಧಿಸುತ್ತಾರೆ ಎನ್ನುವ ಭೀತಿಗೆ ಒಳಗಾದ ರಚಿತಾ ತನೇಜಾ ಇದರ ಸಹವಾಸವೇ ಬೇಡ ಎಂದು ಹಿಂದೆ ಸರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement