
ಬೆಂಗಳೂರು: ಪರಸ್ಪರ ಪ್ರೀತಿ, ವಿಶ್ವಾಸವೇ ಮಾನವ ಧರ್ಮ. ಇದನ್ನೇ ಪ್ರತಿಯೊಂದು ಧರ್ಮಗಳು ಸಾರಿವೆ. ಪ್ರತಿಯೊಬ್ಬರು ಇದನ್ನು ಪಾಲಿಸಬೇಕಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರು.
ಶಾಂತಿ ಮತ್ತು ಸೌಹಾರ್ದತೆಗಾಗಿ ಮಾನವ ಏಕತಾ ಮಿಷನ್ ಹಮ್ಮಿಕೊಂಡಿರುವ `ವಾಕ್ ಆಫ್ ಹೋಪ್' ಭರವಸೆಯ ಪಾದಯಾತ್ರೆ ಅಂಗವಾಗಿ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ `ಭರವಸೆಯ ಸಂಭ್ರಮ ಮತ್ತು ಸಂತ ಶಿಶುನಾಳ ಶರೀಫರ ತತ್ವಗಳ ಸ್ಮರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಭಾನುವಾರ ಮಾತನಾಡಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶ್ರೀ ಎಂ. ನೇತೃತ್ವದಲ್ಲಿ ಶುರುವಾಗಿರುವ ಪಾದಯಾತ್ರೆ ಶಾಂತಿ ಮತ್ತು ಸೌಹಾರ್ದತೆಗೆ ಬೆಳಕು ಚೆಲ್ಲಿರುವುದು ಅತ್ಯಂತ ಶ್ಲಾಘನೀಯ. ಇದರ ಮಹತ್ವ ದೊಡ್ಡದಿದೆ. ಇಂಥ ಪ್ರಯತ್ನಕ್ಕೆ ತಮ್ಮ ಬೆಂಬಲವಿದೆ. ಸಮಾಜದ ಪ್ರತಿಯೊಬ್ಬರು ಈ ಮೂಲಕ ಪರಸ್ಪರ ಪ್ರೀತಿ ಮತ್ತು ಶಾಂತಿಯನ್ನು ಅಳವಡಿಸಿಕೊಳ್ಳಬೇಕಿದೆ ಎಂದರು. ಪಾದಯಾತ್ರೆಯ ಕೇಂದ್ರ ಬಿಂದು ಶ್ರೀ ಎಂ. ಮಾತನಾಡಿ, `ಪ್ರತಿಯೊಂದು ಧರ್ಮಗಳು ಲೋಕದ ಶಾಂತಿ ಮತ್ತು ಸುಖವನ್ನು ಹೇಳಿವೆ. ಆದರೆ ಎಲ್ಲರೂ ತಮ್ಮ ಸ್ವಾರ್ಥದ ಚಿಂತನೆಗಳಲ್ಲಿ ಲೋಕದ ಶಾಂತಿಯನ್ನು ಮರೆತಿದ್ದಾರೆ. ಇದು ಹೋಗಬೇಕಿದೆ. ಸ್ವಾರ್ಥವನ್ನು ಬಿಟ್ಟು ಲೋಕದ ಶಾಂತಿಗೂ ಶ್ರಮಿಸಬೇಕಿದೆ.ಇದನ್ನು ವಿಶ್ವಕ್ಕೆ ಭಾರತದ ಮೂಲಕವೇ ಬೋಧಿಸಬೇಕಿದೆ' ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ನಟ ಸುದೀಪ್ ಮಾತನಾಡಿ, `ವಾಕ್ ಆಫ್ ಹೋಪ್ ' ಕಾರ್ಯಕ್ರಮವನ್ನು ಕೇಳಿ ತಿಳಿದಿದೆ. ಆದರೆ ಇಲ್ಲಿಗೆ ಬಂದಾಗ ಅದರ ಮಹತ್ವ ತಮ್ಮನ್ನು ನಿಜಕ್ಕೂ ಅಚ್ಚರಿ ಮೂಡಿಸಿದೆ. ಒಂದು ಕಾಲದಲ್ಲಿ ಕಾರಾಗೃಹವಾಗಿದ್ದ ಈ ಜಾಗ ಇವತ್ತು ಸ್ವಾತಂತ್ರ್ಯ ಉದ್ಯಾನವನವಾಗಿದೆ. ಪ್ರತಿಯೊಬ್ಬರು ತಮ್ಮ ಮನಸ್ಸುಗಳ ಸುತ್ತ ಹಾಕಿಕೊಂಡಿರುವ ಜೈಲು ಸರಳುಗಳಾಚೆ ಬರಬೇಕಿದೆ. ಮುಕ್ತವಾಗಿ ಚಿಂತಿಸಬೇಕಿದೆ. ಪ್ರತಿಯೊಬ್ಬರನ್ನು ಪ್ರೀತಿಸಬೇಕಿದೆ. ಪ್ರರಸ್ಪರ ವಿಶ್ವಾಸದೊಂದಿಗೆ ಶಾಂತಿ, ನೆಮ್ಮದಿಯಿಂದ ಬದುಕಬೇಕಿದೆ ಎಂದರು.
ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, `ವಾಕ್ ಆಪ್ ಹೋಪ್' ಪಾದಯಾತ್ರೆ ದೇಶಕ್ಕೆ ಹೊಸ ಬೆಳಕು ನೀಡಲಿ ಎಂದು ಆಶಿಸಿದರು. ಕೊನೆಯಲ್ಲಿ ಗಾಯಕ ರಘು ದೀಕ್ಷಿತ್ ಸಂತ ಶಿಶುನಾಳ ಶರೀಫರ ತತ್ವಗಳನ್ನು ಹಾಡಿದರು.
Advertisement