ನೆಲಮಂಗಲ: ಪುಟ್ಟ ಬಾಲಕನಿಗೆ ತನ್ನ ತಂದೆಯೇ ಬೀಡಿ, ಸಿಗರೇಟು ಹಾಗೂ ಸೊಳ್ಳೆ ಬತ್ತಿಯಿಂದ ಸುಟ್ಟು, ಬಸ್ಕಿ ಹೊಡೆಸಿ, ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿರುವುದು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನ ಸಂದ್ರದಲ್ಲಿ ಬೆಳಕಿಗೆ ಬಂದಿದೆ.
ಚಿತ್ರಹಿಂಸೆಗೊಳಗಾಗಿದ್ದ ಬಾಲಕನಿಗೆ 3 ವರ್ಷ. ಪತ್ನಿ ಶೀಲದ ಬಗ್ಗೆ ಪತಿಗಿದ್ದ ಸಂಶಯದಿಂದ ಈ ಪುಟಾಣಿ ಚಿತ್ರಹಿಂಸೆ ಅನುಭವಿಸಿದ್ದಾನೆ. ಆತನ ತಂದೆ, ಅಜ್ಜಿ ಹಾಗೂ ಸೋದರತ್ತೆ ಕಿರುಕುಳ ನೀಡುತ್ತಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಹೊನ್ನಸಂದ್ರದಲ್ಲಿ ಮಗುವಿಗೆ ಪೋಷಕರು ಪ್ರತಿನಿತ್ಯ ನೀಡುತ್ತಿದ್ದ ಚಿತ್ರಹಿಂಸೆಯನ್ನು ನೋಡಲಾಗದೆ ಗ್ರಾಮಸ್ಥರು ನೆಮ್ಮದಿ ಎಂಬ ಎನ್ಜಿಓ ಮೂಲಕ ಪೊಲೀಸರಿಗೆ ವಿಷಯ ಮುಟ್ಟಿಸಿದ್ದರು.
ಪೊರನ ಕೈ ಕಾಲುಗಳು, ಹೊಟ್ಟೆ, ಬೆನ್ನು, ಮುಖಗಳಿಗೆ ಬೀಡಿ ಹಾಗೂ ಸೊಳ್ಳೆಬತ್ತಿಯಿಂದ ಸುಡಲಾಗಿದೆ. ಆತನನ್ನು ರಕ್ಷಿಸಿ ಬೆಂಗಳೂರು ಉತ್ತರ ಮಕ್ಕಳ ಮತ್ತು ಮಹಿಳಾ ಕುಟುಂಬ ಇಲಾಖಾಧಿಕಾರಿ ಡಾ.ಸಿದ್ದರಾಮಣ್ಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಾಲ ಭವನಕ್ಕೆ ದಾಖಲಿಸಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ.
Advertisement