ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ಹತ?

ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ತೆಲಂಗಾಣ ರಾಜ್ಯದ ನೆಲಗೊಂಡ ಬಳಿಯ ಗ್ರಾಮವೊಂದರಲ್ಲಿ...
ಚರ್ಚ್ ಸ್ಚ್ರೀಟ್ ಬಾಂಬ್ ಸ್ಫೋಟ
ಚರ್ಚ್ ಸ್ಚ್ರೀಟ್ ಬಾಂಬ್ ಸ್ಫೋಟ

ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳು ತೆಲಂಗಾಣ ರಾಜ್ಯದ ನೆಲಗೊಂಡ ಬಳಿಯ ಗ್ರಾಮವೊಂದರಲ್ಲಿ ಇತ್ತೀಚೆಗೆ ತೆಲಂಗಾಣ ಪೊಲೀಸರು ನಡೆಸಿದ ಎನ್‍ಕೌಂಟರ್‍ನಲ್ಲಿ ಹತರಾದರಾ? ಇಂಥದ್ದೊಂದು ಅನುಮಾನ ನಗರ ಪೊಲೀಸರನ್ನು ಕಾಡಲಾರಂಭಿಸಿದೆ.

2014 ರ ಡಿಸೆಂಬರ್ 28 ರ ಸಂಜೆ ಹೊಸ ವರ್ಷದ ಸ್ವಾಗತದ ತಯಾರಿಯಲ್ಲಿದ್ದ ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟಗೊಂಡು ತಮಿಳುನಾಡು ಮೂಲದ ಮಹಿಳೆ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ನಿಷೇಧಿತ ಸ್ಟುಡೆಂಟ್ ಇಶ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾದ ಮಧ್ಯಪ್ರದೇಶದ ಮೂಲದ ಅಜೀಜುದ್ದೀನ್ ಹಾಗೂ ಮಹಮ್ಮದ್ ಅಸ್ಲಂ ಏ.4 ರಂದು ನೆಲಗೊಂಡ ಜಿಲ್ಲೆ ಜಾನಕೀಪುರಂ ಬಳಿ ತೆಲಂಗಾಣ ಪೊಲೀಸರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ.

ಇವರಿಗೂ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣಕ್ಕೂ ಸಂಬಂಧವಿರುವ ಸಾಧ್ಯತೆ ಇತ್ತು. ಜೀವಂತವಾಗಿ ಸಿಕ್ಕಿದ್ದರೆ ವಿಚಾರಣೆಯಿಂದ ಚರ್ಚ್‍ಸ್ಟ್ರೀಟ್ ಸ್ಫೋಟದ ಮೇಲೆ ಬೆಳಕು ಚೆಲ್ಲಬಹುದಿತ್ತು. ಆದರೆ, ಈಗ ಈ ಸಾಧ್ಯತೆ ಕ್ಷೀಣಿಸಿದೆ ಎಂದು ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆ ಹಾಗೂ ಆರೋಪಿಗಳ ಬಂಧನ ಕ್ಕಾಗಿ ಈಗಾಗಲೇ ಉತ್ತರಪ್ರದೇಶ, ಬಿಹಾರ, ಪಂಜಾಬ್, ಕೇರಳ, ಜಾರ್ಖಂಡ್, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಹೀಗೆ ಬಹುತೇಕ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸಲಾಯಿತು. ಆದರೆ, ಯಾವುದೇ ಸುಳಿವೂ ಸಿಗಲಿಲ್ಲ. ಸ್ಥಳೀಯ ಪೊಲೀಸರಿಗೆ ಉಗ್ರ ಪ್ರಕರಣಗಳು ಮಾತ್ರವಲ್ಲದೇ ನಗರದಲ್ಲಿ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ಇತರ ಅಪರಾಧ ಪ್ರಕರಣಗಳ ಪತ್ತೆ ಕಾರ್ಯವೂ ಇರುತ್ತದೆ. ನಿರಂತರವಾಗಿ ಆ ಪ್ರಕರಣದ ಶಂಕಿತರ ಮೇಲೆ ಗಮನ ಕೇಂದ್ರಿಕರಿಸುವುದಕ್ಕೆ ಹಿನ್ನೆಡೆಯಾಗುತ್ತಿದೆ.

ಎನ್‍ಐಎಗೆ ವರ್ಗಾವಣೆ ಯಾಗಿಲ್ಲ: ಪ್ರಕರಣದ ತನಿಖೆ ನಡೆಸುತ್ತಿರುವ ನಗರ ಪೊಲೀಸರಿಗೆ ಆರೋಪಿಗಳ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳಕ್ಕೆ (ಎನ್‍ಐಎ) ವಹಿಸುವುದಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಘೋಷಿಸಿದ್ದರು. ಆದರೆ, ಇದಿನ್ನೂಕಾರ್ಯಗತಗೊಂಡಿಲ್ಲ. ವಿಚಾರಣೆಗೆ ತೊಡಕುಗಳು ಉಗ್ರರನ್ನು ಬಾಡಿ ವಾರೆಂಟ್ ಆಧಾರದ ಮೇಲೆ ನಗರಕ್ಕೆ ಕರೆತಂದು ವಿಚಾರಣೆ ನಡೆಸಬಹುದು. ಅವರ ತಂಡಗಳು, ಮುಖ್ಯಸ್ಥರು, ಕಿರಿಯರು ಹೀಗೆ ಸಕ್ರಿಯವಾಗಿರುವ ಜಾಲದ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದೆ.

ಬಿಹಾರದಿಂದ ಒಬ್ಬ ಉಗ್ರನನ್ನು ಕರೆತಂದು ವಿಚಾರಣೆ ನಡೆಸಲಾಯಿತು. ಅದೇ ಮಾದರಿಯಲ್ಲಿ ಇನ್ನೂ ಹಲವರನ್ನು ವಿಚಾರಣೆ ನಡೆಸಿದರೆ, ಬಂಧನಕ್ಕೊಳಗಾಗದೆ ಹೊರಗೆ ತಲೆ ಮರೆಸಿಕೊಂಡು ಓಡಾಡಿಕೊಂಡಿರುವ ಉಗ್ರರ ಜಾಲಗಳ ಮಾಹಿತಿ ಸಿಗಬಹುದು. ಆದರೆ, ಅಲ್ಲಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಈ ಉಗ್ರರನ್ನು ಕರೆತರಲು ಒಪ್ಪುವುದಿಲ್ಲ. ಇದಕ್ಕೆ ನ್ಯಾಯಾಲದ ಅನುಮತಿ ಸಿಗುವುದೂ ಕಷ್ಟ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com