ಶೌಚಾಲಯ ಅವ್ಯವಹಾರ ಶೀಘ್ರ ಬಹಿರಂಗ: ಎಚ್.ಕೆ ಪಾಟೀಲ್
ಧಾರವಾಡ: ಬಿಜೆಪಿ ಆಡಳಿತದ ಅವಧಿಯಲ್ಲಿ 19 ಲಕ್ಷ ಶೌಚಾಲಯಗಳ ಅವ್ಯವಹಾರ ಪ್ರಕರಣ ಕುರಿತು ಲೋಕಾಯುಕ್ತ ಹಾಗೂ ಜಂಟಿ ಸದನ ಸಮಿತಿ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು ಗ್ರಾಮೀಣ ನೈರ್ಮಲ್ಯದ ಹೆಸರಿನಲ್ಲಿ 19 ಲಕ್ಷ ಶೌಚಾಲಯಗಳ ಹಣವನ್ನು ಬಿಜೆಪಿ ಸರ್ಕಾರ ನುಂಗಿ ನೀರು ಕುಡಿದಿದೆ. 2014-15 ರಲ್ಲಿ 10 ಲಕ್ಷ ಶೌಚಾಲಯ ನಿರ್ಮಾಣದ ಗುರಿ ಹೊಂದಿದ್ದು, ಸದ್ಯ 8.4 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದರು.
ಪಂಚಾಯತ್ ರಾಜ್ ವಿಧೇಯಕಕ್ಕೆ ಉಭಯ ಸದನಗಳು ಒಪ್ಪಿಗೆ ಸೂಚಿಸಿವೆ. ಆದರೆ ರಾಜ್ಯಪಾಲರು ಸ್ಪಷ್ಟೀಕರಣ ಕೋರಿದ್ದಾರೆ. ಈ ಕುರಿತು ಅಡ್ವೋಕೇಟ್ ಜನರಲ್ ಅಭಿಪ್ರಾಯ ಸಂಗ್ರಹಿಸಿ ವಿಸ್ತೃತ ವರದಿಯನ್ನು ಮತ್ತೆ ರಾಜ್ಯಪಾಲರಿಗೆ ಸಲ್ಲಿಸಲಾಗುವುದು ಎಂದರು.
ಠೇವಣಿದಾರರ ಮೇಲೆ ಕ್ರಮ: ನರೇಗಾ ಇಲಾಖೆಯ 525 ಕೋಟಿ ರೂಪಾಯಿ ಹಣ ದುರುಪಯೋಗಪಡಿಸಿಕೊಂಡು ಠೇವಣಿ ರೂಪದಲ್ಲಿಟ್ಟುಕೊಂಡು ಲಾಭ ಮಾಡಿಕೊಳ್ಳುತ್ತಿದ್ದ ಪ್ರಕರಣದ ತನಿಖೆಯ ಆನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆಗೊಂಡ ಹಣ ಹಾಗೂ ಅನುಷ್ಠಾನ ಕಾರ್ಯ ಸಾಧನೆಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಲಭಿಸಿದೆ ಎಂದು ಅವರು ಹೇಳಿದರು. ಏಪ್ರಿಲ್ 24 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಾಜ್ಯಕ್ಕೆ ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ 3.156 ಕೋಟಿ ಅನುದಾನ ಮಂಜೂರಾಗಿದೆ.
ತಾರತಮ್ಯ ಮಾಡದೇ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಎಚ್. ಕೆ ಪಾಟೀಲ್ ತಿಳಿಸಿದರು.