ಗುಂಡೇಟು ತಿಂದ ಸ್ಪಾಟ್ ನಾಗ
ಗುಂಡೇಟು ತಿಂದ ಸ್ಪಾಟ್ ನಾಗ

ಲಾಂಗ್ ಬೀಸಿದ ಸ್ಪಾಟ್ ನಾಗನಿಗೆ ಬಿತ್ತು ಗುಂಡು

ಸಬ್ ಇನ್ಸ್‍ಪೆಕ್ಟರ್ ಮೇಲೆ ಲಾಂಗ್‍ನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರ ನಾಗರಾಜ್ ಅಲಿಯಾಸ್...
Published on

ಬೆಂಗಳೂರು: ಸಬ್ ಇನ್ಸ್‍ಪೆಕ್ಟರ್ ಮೇಲೆ ಲಾಂಗ್‍ನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ದರೋಡೆಕೋರ ನಾಗರಾಜ್ ಅಲಿಯಾಸ್ ಸ್ಪಾಟ್ ನಾಗ(26) ಮೇಲೆ ಗುಂಡು ಹಾರಿಸಿ, ಆತನನ್ನು ಸಿನಿಮೀಯ ಶೈಲಿಯಲ್ಲಿ ಬಂಧಿಸಿರುವ ಘಟನೆ ರಾಜಗೋಪಾಲನಗರದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ರಾಜಗೋಪಾಲನಗರ ಠಾಣೆ ಎಸ್ಸೈ ವಾಸೀಂ ಉಲ್ಲಾ ಖಾನ್ ಸ್ಪಾಟ್ ನಾಗನ ಮೇಲೆ ಗುಂಡು ಹಾರಿಸಿ, ಬಂಧಿಸಿದವರು. ರೌಡಿಯೊಂದಿಗಿನ ಕಾಳಗದಲ್ಲಿ ಎಸ್ಸೈ ವಾಸೀಂ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.ವಬುಧವಾರ ತಡರಾತ್ರಿ 1.30ರ ಸುಮಾರಿಗೆ ಇಲ್ಲಿನ ಕರೀಂ ಸಾಬ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಹೇಗೆ ನಡೆಯಿತು ಕಾರ್ಯಾಚರಣೆ?:
ಬುಧ ವಾರ ರಾತ್ರಿ ಸ್ಪಾಟ್ ನಾಗ ಕರೀಂ ಸಾಬ್ ಬಡಾವಣೆಯಲ್ಲಿ ದರೋಡೆಗೆ ಹೊಂಚು ರೂಪಿಸಿ ಕುಳಿತಿದ್ದಾನೆ ಎನ್ನುವ ಮಾಹಿತಿ ಎಸ್ಸೈ ವಾಸೀಂ ಅವರಿಗೆ ಬಂದಿತ್ತು. ರಾತ್ರಿ ಗಸ್ತಿನಲ್ಲಿದ್ದ ಎಸೈ ಕೂಡಲೇ ದ್ವಿಚಕ್ರ ವಾಹನದಲ್ಲಿ ಆರೋಪಿ ಅಡಗಿ ಕುಳಿತಿದ್ದಾನೆ ಎನ್ನಲಾದ ಸ್ಥಳಕ್ಕೆ ತೆರಳಿದ್ದಾರೆ. ಅದರಂತೆ ಆರೋಪಿ, ಖಾಲಿ ಮೈದಾನದಲ್ಲಿ ದರೋಡೆಗೆ ಹೊಂಚು ರೂಪಿಸಿ ಕುಳಿತಿದ್ದ. ಕೂಡಲೇ ಆತನ ಬಳಿ ತೆರಳಿದ ಎಸೈ ಶರಣಾಗುವಂತೆ ಹೇಳಿದ್ದಾರೆ. ಆದರೆ, ಎಸ್ಸೈ ಮೇಲೆ ಲಾಂಗ್ ಬೀಸಿದ ಆರೋಪಿ ನಾಗ, ಕತ್ತಲೆಯಲ್ಲಿ ಮಣ್ಣಿನ ಗುಡ್ಡೆ ಹಿಂದೆ ಅಡಗಿ ಪರಾರಿಯಾಗಲು ಯತ್ನಿಸಿದ್ದಾನೆ. ಲಾಂಗ್ ಬೀಸಿದಾಗ ಅದರಿಂದ ತಪ್ಪಿಸಿಕೊಳ್ಳುವಾಗ ಎಸ್ಸೈ ವಾಸೀಂ ಅವರು ಕೆಳಗೆ ಬಿದ್ದಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.

ಮತ್ತೊಮ್ಮೆ ಆರೋಪಿಯನ್ನು ಹಿಡಿಯಲು ಮಣ್ಣಿನ ಗುಡ್ಡೆ ಬಳಿ ತೆರಳಿದಾಗ ನಾಗ, ಲಾಂಗ್‍ನಿಂದ ಮತ್ತೆ ಹಲ್ಲೆ ನಡೆಸಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಎಸ್ಸೈ ಅರು ನಾಗನ ಮೊಣಕಾಲಿನ ಕೆಳಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ಓಡಲಾಗದೆ ಶರಣಾಗಿದ್ದಾನೆ. ಕೂಡಲೇ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಪಾಟ್ ನಾಗನ ಹಿನ್ನೆಲೆಯೇನು?: ದರೋಡೆ, ಡಕಾಯಿತಿ, ಸುಲಿಗೆ, ಬೆದರಿಕೆ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಹೀಗೆ 7 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕಮಲ ನಗರ ನಿವಾಸಿ ಸ್ಪಾಟ್ ನಾಗ ಉತ್ತರ ವಿಭಾಗದ ಪೊಲೀಸರ ನಿದ್ದೆಗೆಡಿಸಿದ್ದ. ರಾಜಗೋಪಾಲನಗರ, ಬಸವೇಶ್ವರ ನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ ಈತನ ವಿರುದಟಛಿ ಪ್ರಕರಣಗಳು ದಾಖಲಾಗಿವೆ.
ತನ್ನ ಸಹಚರ ರೊಂದಿಗೆ ಸೇರಿ ಒಂಟಿ ಮಹಿಳೆ ಮನೆಗಳಿಗೆ ನುಗ್ಗಿ ದರೋಡೆ, ಸುಲಿಗೆ ಕೃತ್ಯಗಳನ್ನು ಎಸಗುತ್ತಿದ್ದು ಹಲವು ತಿಂಗಳುಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ. ಜನವರಿಯಲ್ಲಿ ರಾಜಗೋಪಾಲ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೀತಾ ಎಂಬುವರ ಮನೆಗೆ ಸಹಚರರೊಂದಿಗೆ ನುಗ್ಗಿದ ಸ್ಪಾಟ್ ನಾಗ, ಸರ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದ. ಆದರೆ, ದೋಚಿದ ಸರ ಚಿನ್ನದ್ದು ಅಲ್ಲ ಎಂದು ತಿಳಿದು ಅದನ್ನು ಅಲ್ಲೇ ಬಿಸಾಡಿ ಪರಾರಿಯಾಗಿದ್ದ. ಈ ಸಂಬಂಧ ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com