ರೈತರ ಆತ್ಮಹತ್ಯೆ ಪ್ರಕರಣ: ಪ್ಯಾಕೇಜ್‍ ಗೆ ಜನಾರ್ಧನ ಪೂಜಾರಿ ಆಗ್ರಹ

ರೈತರ ಆತ್ಮಹತ್ಯೆ ಪ್ರಕರಣ ನಡೆಯುತ್ತಿರುವ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು- ಜನಾರ್ದನ ಪೂಜಾರಿ
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ (ಸಂಗ್ರಹ ಚಿತ್ರ)

ಮಂಗಳೂರು: ರೈತರ ಆತ್ಮಹತ್ಯೆ ಪ್ರಕರಣ ನಡೆಯುತ್ತಿರುವ ಕರ್ನಾಟಕ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಿಗೂ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಒತ್ತಾಯಿಸಿದ್ದಾರೆ.

ದೇಶದಲ್ಲಿ ನಾನಾ ಕಾರಣಕ್ಕೆ ರೈತರ ಆತ್ಮಹತ್ಯೆ ನಡೆಯುತ್ತಿದೆ. ಆದರೆ, ಇದಾವುದಕ್ಕೂ ಪ್ರಧಾನಿ ಮೋದಿ ಸ್ಪಂದಿಸುತ್ತಿಲ್ಲ. ಅಲ್ಲದೆ, ರೈತರ ಬಗ್ಗೆ ಲೋಕಸಭೆಯಲ್ಲೂ ಪ್ರಸ್ತಾಪಿಸುತ್ತಿಲ್ಲ. ಉದ್ಯಮಿ ಗಳಿಗೆ ಕೋಟಿಗಟ್ಟಲೆ ತೆರಿಗೆ ವಿನಾಯ್ತಿ ನೀಡುವ ಅವರು ರೈತರಿಗೇಕೆ ಪ್ರಾಶಸ್ತ್ಯ ನೀಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ರಾಹುಲ್‍ಗಾಂಧಿ ಆಗಮಿಸುವವರಿದ್ದರು. ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಸರ್ಕಾರ ಕೈಗೊಂಡ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರಿಂದ ಮುಂದಿನ ಬಾರಿ ಬರುವುದಾಗಿ ತಿಳಿಸಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ, ಸಂಸದ ಯಡಿಯೂರಪ್ಪ ಲೋಕಸಭೆಯಲ್ಲಿ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದರೂ ತಪ್ಪಿಯೂ ರೈತರ ಮನೆಗೆ ಭೇಟಿ ನೀಡುವಂತೆ ಹಾಗೂ ವಿಶೇಷ ಪರಿಹಾರ ಮೊತ್ತ ನೀಡುವಂತೆ ಪ್ರಧಾನಿಯನ್ನು ಆಗ್ರಹಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ವ್ಯಾಪಂ ಹಗರಣ, ಪಂಕಜಾ ಮುಂಡೆ ಹಗರಣಗಳಿಂದ ಬಿಜೆಪಿಗೆ ಭ್ರಷ್ಟಾಚಾರ ಕಳಂಕ ತಟ್ಟಿದೆ. ಇದನ್ನು ಲೋಕಸಭೆಯಲ್ಲಿ ನಿರಾಕರಿಸುವ ಮೂಲಕ ಸಚಿವರು ಚರ್ಚೆಗೂ ಆಸ್ಪದ ನೀಡುತ್ತಿಲ್ಲ. ಧೈರ್ಯವಿದ್ದರೆ ಮುಕ್ತ ಚರ್ಚೆಗೆ ಅವಕಾಶ ನೀಡಬೇಕಿತ್ತು. ಅದು ಬಿಟ್ಟು ಭ್ರಷ್ಟಾಚಾರವೇ ಆಗಿಲ್ಲ ಎಂದು ವಾದಿಸುವ ಮೂಲಕ ಮೋದಿ ದುಶ್ಯಾಸನ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com