ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಗರ ಹೊರವಲಯದಲ್ಲಿ ನಡೆದಿದೆ. ವರ್ತೂರಿನ ಸೂಲಿಕುಂಟೆಯಲ್ಲಿ ಈ ಘಟನೆ ಸಂಭವಿಸಿದೆ. ಆಶಾ (29) ಎಂಬುವರು ಆತ್ಮಹತ್ಯೆ ಮಾಡಿ ಕೊಂಡಿದ್ದು, ಇದಕ್ಕೂ ಮೊದಲು ಮಕ್ಕಳಾದ ಕೀರ್ತನಾ (10), ಲಕ್ಷ್ಮಿ (7) ನೇಣು ಬಿಗಿದು ಕೊಲೆ ಮಾಡಿದ್ದಾರೆ.
ಹೊಸೂರಿನ ದೇವಗೊಂಡನಹಳ್ಳಿಯ ಆಶಾ ಅವರಿಗೆ 12 ವರ್ಷದ ಹಿಂದೆ ಸೂಲಿಕುಂಟೆ ನಿವಾಸಿ ಕೃಷಿಕ ಶ್ರೀನಿವಾಸರೆಡ್ಡಿ ಅವರ ಜತೆ ವಿವಾಹವಾಗಿತ್ತು ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಆಶಾ, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣವಾಗಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿದ್ದರೆಂದು ಸಂಬಂಧಿಕರು ವಿಚಾರಣೆ ವೇಳೆ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ಪತಿ ಶ್ರೀನಿವಾಸರೆಡ್ಡಿ ತೋಟಕ್ಕೆ ಹೋಗಿದ್ದರು. ಮಧ್ಯಾಹ್ನ 3 ಗಂಟೆಗೆ ಪತಿ ಶ್ರೀನಿವಾಸರೆಡ್ಡಿ ಮನೆಗೆ ವಾಪಸಾದಾಗ ಒಳಗಿನಿಂದ ಚಿಲಕ ಹಾಕಿತ್ತು. ಹಲವು ಬಾರಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಗರ್ಭಕೋಶ ಸಮಸ್ಯೆಯಿಂದಾಗಿ ಜೀವನದ ಮೇಲೆ ಜಿಗುಪ್ಸೆಯಾಗಿದೆ. ನಾನು ಸತ್ತ ನಂತರ ನನ್ನ ಮಕ್ಕಳು ಅನಾಥರಾಗುತ್ತಾರೆ. ತಾಯಿ ಮೃತಪಟ್ಟ ಬಳಿಕ ನಾನು ಅನುಭವಿಸಿದ ಕಷ್ಟ ನನ್ನ ಮಕ್ಕಳಿಗೆ ಬರಬಾರದೆಂಬ ಕಾರಣಕ್ಕೆ ಅವರನ್ನೂ ನನ್ನ ಜತೆಯಲ್ಲೆ ಕರೆದೊ ತ್ತಿದ್ದೇನೆ ಎಂದು ಆಶಾ ಮರಣ ಪತ್ರ ಬರೆದಿಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement