ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಸರಿಪಡಿಸುವುದಕ್ಕೆ ಸರ್ಕಾರ ಹಲವು ಮಾರ್ಗೋಪಾಯಗಳ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಹೆಪಟೈಟಿಸ್ ಸಿ ಕಾಯಿಲೆ ಬಗ್ಗೆ ಅರಿವು ಮೂಡಿಸಲು ಅಮೆರಿಕದ ಗಿಲಿಯೆಟ್ ಸಂಸ್ಥೆ ಹಾಗೂ ಬಯೋಕಾನ್ ಜತೆ ಚರ್ಚೆ ನಡೆಸಿದ ಬಳಿಕ ಜತೆ ಮಾತನಾಡಿದ ಅವರು, ವಿಮ್ಸ್, ವಾಣಿವಿಲಾಸ ಸೇರಿದಂತೆ ಕೆಲ ಆಸ್ಪತ್ರೆಗಳು ವೈದ್ಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತದೆ. ಆದಾಗಿಯೂ ತಾಯಿ ಮಕ್ಕಳ ಆರೋಗ್ಯ ಮತ್ತು ಜೀವ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಈ ದಿಶೆಯಲ್ಲಿ ನಾವು ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಹಠಾತ್ ದಾಳಿ ನಡೆಸುವುದು, ಮಾಸಿಕ ಪರಿಶೀಲನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ವಿಮ್ಸ್ ನಂಥ ಘಟನೆ ಮರುಕಳಿಸದೇ ಇರುವುದಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು. ಹೆಪಟೈಟಿಸ್ ಬಿಗೆ ಔಷಧವಿದೆ. ಆದರೆ ಹೆಪಟೈಟಿಸ್ ಸಿಗೆ ಇದುವರೆಗೆ ಔಷಧ ಇಲ್ಲ. ಈ ಹಿನ್ನೆಲೆಯಲ್ಲಿ ಗಿಲಿಯೆಟ್ ಸಂಸ್ಥೆ ಹಾಗೂ ಬಯೋಕಾನ್ ಸಹಾಶ್ರಯದಲ್ಲಿ ಮಾತ್ರೆಗಳನ್ನು ತಯಾರಿಸುವುದಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಭಾರತಕ್ಕೆ ಮಾತ್ರವಲ್ಲದೆ ವಿಶ್ವದ ಎಲ್ಲ ಭಾಗಕ್ಕೆ ಇಲ್ಲಿಂದ ಮಾತ್ರೆಗಳನ್ನು ಪೂರೈಕೆ ಮಾಡುವ ಯೋಜನೆ ಇದಾಗಿದೆ ಎಂದರು.
ಕರ್ನಾಟಕದಲ್ಲಿ ಒಂದು ಜಿಲ್ಲೆಯನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಆಯ್ದುಕೊಂಡು, ರೋಗಪತ್ತೆ ಹಚ್ಚುವುದು, ಅರಿವು ಮೂಡಿಸುವುದು ಹಾಗೂ ಔಷಧ ಬಳಕೆ ಮಾಡಲಾಗುವುದು. ಜತೆಗೆ ವ್ಯಾಪಕ ಪ್ರಮಾಣದಲ್ಲಿ ಜನಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು. ಒಂದೇ ಆಸ್ಪತ್ರೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದವರನ್ನು ಇನ್ನು ಮುಂದೆ ಬೇರೆಡೆಗೆ ವರ್ಗಾಯಿಸುವ ನೀತಿಯನ್ನು ರಾಜ್ಯ ಸರ್ಕಾರ ಈಗಾಗಲೆ ಜಾರಿಗೆ ತಂದಿದೆ. ಅದೇ ರೀತಿ ಮೂರು ವರ್ಷ ಸೇವೆ ಸಲ್ಲಿಸಿದವರನ್ನು ಕೋರಿಕೆ ಮೇಲೆ ವರ್ಗಾಯಿಸುವ ಉದ್ದೇಶವೂ ಸರ್ಕರಕ್ಕೆ ಇದೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಂಬಿಬಿಎಸ್ ವೈದ್ಯರ ನೇಮಕ ಮಾಡಲಾಗುವುದು. ಈಗಾಗಲೇ 381 ವೈದ್ಯರ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಲಾಗಿದೆ. 87 ದಂತ ವೈದ್ಯರ ನೇಮಕವೂ ಆಗುತ್ತದೆ. ಬ್ಯಾಕ್ ಲಾಗ್ ಹುದ್ದೆ ಬಿಟ್ಟು ಉಳಿದವುಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.
Advertisement