ಅಸಹಿಷ್ಣುತೆ ಯಾರಿಂದ ಆದರೂ ತಪ್ಪೇ: ಪೇಜಾವರ ಶ್ರೀ
ಬಾಗಲಕೋಟೆ: ``ಅಸಹಿಷ್ಣುತೆ ನಡವಳಿಕೆ ಯಾರಿಂದಲೇ ಆದರೂ ಅದು ಖಂಡನೀಯ. ಈ ವಿಚಾರದಲ್ಲಿ ಎಲ್ಲ ಧರ್ಮೀಯರ ನಡೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ನಾಡಿನ ಬುದ್ಧಿ ಜೀವಿಗಳು ಅಷ್ಟರ ಮಟ್ಟಿಗೆ ಜಾತ್ಯತೀತ ನಿಲುವು ಪ್ರದರ್ಶಿಸಲಿ,'' ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದ್ದಾರೆ.
ಭಾನುವಾರ ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ``ಹಿಂದುಗಳು ಅಸಹಿಷ್ಣುತೆ ವಾತಾವರಣ ಸೃಷ್ಟಿಸುತ್ತಿದ್ದಾರೆಂಬ ವಾದ ಮಂಡಿಸಿ ಪ್ರತಿಭಟಿಸುವ ದನಿಗಳು ವ್ಯಾಪಕಗೊಳ್ಳುತ್ತಿವೆ. ಈ ತರಹದ ನಡವಳಿಕೆಗಳು ತರವಲ್ಲ. ಅಸಹಿಷ್ಣುತೆ ವ್ಯಕ್ತಪಡಿಸುವ ಎಲ್ಲ ಧರ್ಮ ಹಾಗೂ ನೆಲೆಗಳನ್ನು ಖಂಡಿಸುವ ಮನೋಭಾವ ಗೋಚರಿಸಲಿ,'' ಎಂದರು
``ಬ್ರಾಹ್ಮಣರು ದೇಶ ಬಿಟ್ಟು ಹೋಗಬೇಕೆಂಬ ಸಾಹಿತಿ ಪ್ರೊ. ಚಂಪಾ ಹೇಳಿಕೆಯಲ್ಲಿ ಗಂಭೀರತೆಗಿಂತ ಹಾಸ್ಯವಿದೆ. ಹೀಗಾಗಿ ಹೇಳಿಕೆ ವಾಪಸು ಪಡೆಯುವಂತೆ ಅವರನ್ನು ಆಗ್ರಹಿಸಲಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಹಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಗೋಹತ್ಯೆ ನಿಷೇಧ ರಾಷ್ಟ್ರೀಯ ನೀತಿಯಾಗಬೇಕು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು. ಇದು ಪಕ್ಷಾತೀತವಾಗಿ ನಡೆಯಬೇಕಾದ ಕೆಲಸ,'' ಎಂದೂ ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ