ಟಿಪ್ಪರ್ ಲಾರಿ ಹರಿದು ಮೆಟ್ರೋ ಕಾರ್ಮಿಕ ಸಾವು

ಟಿಪ್ಪರ್ ಲಾರಿ ಹರಿದು ಮೆಟ್ರೋ ಕಾಮಗಾರಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ಮೃತಪಟ್ಟಿರುವ ಘಟನೆ ಕೆಂಪೇಗೌಡ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಟಿಪ್ಪರ್ ಲಾರಿ ಹರಿದು ಮೆಟ್ರೋ ಕಾಮಗಾರಿ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ  ಮೃತಪಟ್ಟಿರುವ ಘಟನೆ ಕೆಂಪೇಗೌಡ ಬಸ್ ನಿಲ್ದಾಣ ಬಳಿ ಭಾನುವಾರ ತಡರಾತ್ರಿ   ಸಂಭವಿಸಿದೆ.

ಜಾರ್ಖಂಡ್ ಮೂಲದ ಸಂತೋಷ್ ಒರನ್ (24) ಮೃತ ದುರ್ದೈವಿ. ಜಿವೈಟಿ ಕೋಸ್ಟಲ್  ಕಂಪನಿ  ನೌಕರನಾಗಿದ್ದ ಈತ, ಯಲಹಂಕದಲ್ಲಿ ನೀಡಿರುವ ವಸತಿಗೃಹದಲ್ಲಿ ವಾಸವಿದ್ದ. ಶನಿವಾರ ರಾತ್ರಿ  ಪಾಳಿ ಕೆಲಸಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 2.45ರ ಸುಮಾರಿಗೆ ಮೆಜೆಸ್ಟಿಕ್ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ಸಂತೋಷ್ ಕೆಲಸ  ಮಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಕಾಮಗಾರಿ ಮಣ್ಣು ಸಾಗಿಸುತ್ತಿದ್ದ ಲಾರಿ ಚಾಲಕ, ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಹಿಂದೆ ಇರುವ ಇತರೆ ಕಾರ್ಮಿಕರು ಗಮನಿಸದೆ  ಸಂತೋಷ್‍ನ ಮೈ ಮೇಲೆ ಹತ್ತಿಸಿಬಿಟ್ಟಿದ್ದಾನೆ. ಇದನ್ನು ಗಮನಿಸಿದ ಸಹ ಕಾರ್ಮಿಕರು ವಾಹನ   ನಿಲ್ಲಿಸುವಂತೆ ಕೂಗಾಡಿದರು ಪ್ರಯೋಜನವಾಗಿಲ್ಲ.

ಹಿಂಬದಿ ಚಕ್ರ ಹರಿದು ತೀವ್ರ ರಕ್ತಸ್ರಾವವಾಗಿದ್ದ ಸಂತೋಷ್ ನನ್ನು ಸಹ ಕಾರ್ಮಿಕರು  ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದರು. ಅಷ್ಟರಲ್ಲಾಗಲೇ ಸಂತೋಷ್ ಮೃತಪಟ್ಟಿದ್ದ. ಈ ಬಗ್ಗೆ  ಮಾಹಿತಿ ಸಂಗ್ರಹಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಒಡಿಶಾ ಮೂಲದ ಚಾಲಕ  ಅಭಿಮನ್ಯು ಎಂಬಾತನನ್ನು ಬಂಧಿಸಿದ್ದಾರೆ.

ಸಂತೋಷ್ ಪಾಲಕರಿಗೆ ಮಾಹಿತಿ ರವಾನಿಸಲಾಗಿದ್ದು ಅವರು ನಗರಕ್ಕೆ ಬರಲು  ಎಂಆರ್‍ಸಿಎಲ್ ಗುತ್ತಿಗೆದಾರ ವ್ಯವಸ್ಥೆ ಕಲ್ಪಿಸಿದ್ದಾರೆ. ಅಲ್ಲದೇ ಶವವನ್ನು ಜಾರ್ಖಂಡ್‍ಗೆ  ತಲುಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಮೃತನ ಕುಟುಂಬಕ್ಕೆ ಕೂಡಲೇ 50 ಸಾವಿರ ಪರಿಹಾರ  ವಿತರಿಸಲಾಗುತ್ತದೆ. ಅಲ್ಲದೇ ಕಾರ್ಮಿಕರ ಪರಿಹಾರ ನಿಧಿಯಿಂದಲೂ ಪರಿಹಾರ ದೊರೆಯುತ್ತದೆ. ಇದಲ್ಲದೇ ಬಿಎಂಆರ್‍ಸಿಎಲ್ ಕೂಡ 1 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ಮುಚ್ಚಿ ಹಾಕುವ ಯತ್ನ: ಘಟನೆ ಸಂಭವಿಸಿ ಹಲವು ತಾಸುಗಳ ಬಳಿಕ ಸಂತೋಷ್  ಮೃತಪಟ್ಟಿರುವ ಸುದ್ದಿಯನ್ನು ಆಸ್ಪತ್ರೆ ಸಿಬ್ಬಂದಿಯೇ ಪೊಲೀಸರಿಗೆ ತಿಳಿಸಬೇಕಾಯಿತು.  ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಸಹ ಕಾರ್ಮಿಕರೆ ಸಂತೋಷ್ ಶವವನ್ನು  ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲು ಯತ್ನಿಸಿದ್ದರು. ಆದರೆ, ಸಂತೋಷ್ ಸಾವಿಗೆ ನಿಜವಾದ ಕಾರಣ ತಿಳಿಸಬೇಕು. ಶವ ಪರೀಕ್ಷೆ ಬಳಿಕವೇ ಶವವನ್ನು ಹಸ್ತಾಂತರಿಸಲಾಗುತ್ತದೆ  ಎಂದು ಆಸ್ಪತ್ರೆಯ ಸಿಬ್ಬಂದಿ ಕಾರ್ಮಿಕರಿಗೆ ತಿಳಿಸಿದರು. ಈ ಸಂಬಂಧ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಕಿನ ವ್ಯವಸ್ಥೆ ಇಲ್ಲ: ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ  ಇರಲಿಲ್ಲ. ಕತ್ತಲೆ ಇರುವ ಕಾರಣ ಹಿಂದಕ್ಕೆ ತೆಗೆದುಕೊಳ್ಳುವಾಗ ಸಂತೋಷ್ ಎಲ್ಲಿ ನಿಂತಿದ್ದಾನೆ  ಎಂಬುದು ಚಾಲಕನಿಗೆ ಕಾಣಿಸದ್ದರಿಂದ ಈ ದುರ್ಘಟನೆ ಸಂಭವಿಸಿದೆ. ನಿರ್ಲಕ್ಷ್ಯ ಆರೋಪದ  ಅನ್ವಯ ಲಾರಿ ಚಾಲಕ ಅಭಿಮನ್ಯುನನ್ನು ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ  ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ  ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com