ಬೆಂಗಳೂರು: ಮಾರ್ಚ್ 2016ರ ಅಂತ್ಯದ ವೇಳೆಗೆ ನಗರದ 45 ಕೆರೆಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಬೆಂಗಳೂರು ಜಲಮಂಡಳಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ.
ಬೆಂಗಳೂರು ನಗರದಲ್ಲಿನ ಕೆರೆಗಳಿಗೆ ಕೊಳಚೆ ಮತ್ತು ತ್ಯಾಜ್ಯ ನೀರು ಹರಿಸುತ್ತಿರುವುದನ್ನು ತಡೆಯುವಂತೆ ಕೋರಿ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾ.ಬಿ.ಮನೋಹರ್ ಅವರಿದ್ದ ಪೀಠಕ್ಕೆ ಮಂಡಳಿ ಪ್ರಮಾಣ ಪತ್ರ ಸಲ್ಲಿಸಿದೆ.
ಕೆರೆಗಳಿಗೆ ನೀರು ಸೇರುವ ಭಾಗಗಳಲ್ಲಿ ಶುದ್ಧೀಕರಣ ಘಟಕಗಳ ಸಂಖ್ಯೆ ಕಡಿಮೆಯಿದೆ. ಆದಕಾರಣ ಕೊಳಚೆ ನೀರು ಕೆರೆ ಸೇರುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕಾದ ಅಗತ್ಯವಿದೆ. ಆದರೆ, ಅನುದಾನದ ಕೊರತೆಯಿಂದಾಗಿ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದು ವಿಳಂಬವಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದೆ. ಮಾರ್ಚ್ ಅಂತ್ಯದ ವೇಳೆಗೆ ಕೆರೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು 2016ರ ಏಪ್ರಿಲ್ 1ಕ್ಕೆ ಮುಂದೂಡಿತು. ಮಳೆ ನೀರು ಕಾಲುವೆಗಳಿಗೆ, ಕೊಳಚೆ ನೀರನ್ನೂ ಬಿಡಲಾಗುತ್ತಿದೆ.
ಈ ಚರಂಡಿ ಜಾಗವೂ ಖಾಸಗಿ ವ್ಯಕ್ತಿಗಳಿಂದ ಒತ್ತುವರಿಯಾಗಿದೆ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಳೆ ಸುರಿದರೆ, ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿದೆ. ಜತೆಗೆ, ಕೆರೆಗಳಿಗೆ ಕೊಳಚೆ ನೀರು ಬಿಡಲಾಗುತ್ತಿದೆ. ಹೀಗಾಗಿ, ರಾಜಕಾಲುವೆ ಹಾಗೂ ಮಳೆ ನೀರು ಚರಂಡಿಗಳ ಸಂರ್ಪಕವನ್ನು ಬೇರ್ಪಡಿಸಬೇಕು. ಕೆರೆಗಳಿಗೆ ಕೊಳಚೆ ನೀರು ಬಿಡುವುದನ್ನು ತಡೆಯಬೇಕು.
ಅಲ್ಲದೆ, ಕೆರೆಗಳಿಗೆ ಮಳೆ ನೀರು ಅಥವಾ ಕೊಳಚೆ ನೀರು ಸೇರುವ ಮುನ್ನಾ, ಶುದಿಟಛೀಕರಣ ಘಟಕಗಳನ್ನು ಸ್ಥಾಪಿಸಿ, ನೀರು ಶುದ್ಧೀಕರಣ ಮಾಡಬೇಕು. ತದ ನಂತರವಷ್ಟೇ ಕೆರೆಗೆ ನೀರು ಬಿಡಬೇಕು. ಕೆರೆಗೆ ತ್ಯಾಜ್ಯ ಸೇರುವುದನ್ನೂ ನಿಯಂತ್ರಿಸಬೇಕು. ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಬಿಬಿ ಎಂಪಿ ಹಾಗೂ ಜಲ ಮಂಡಳಿಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ನ್ಯಾಯಾಲಯವನ್ನು ಕೋರಲಾಗಿದೆ.
Advertisement