ಬೆಂಗಳೂರು: ಜಲಸಂವರ್ಧನಾ ಯೋಜನೆಯನ್ನು ಮತ್ತೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು, ವಿಶ್ವ ಬ್ಯಾಂಕ್ ನೆರವಿನಲ್ಲಿ 5,000 ಕೆರೆಗಳನ್ನು ಪುನರುಜ್ಜೀವನಗೊಳಿಸುವು ದಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧೀಕಾರದ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಣ್ಣ ನೀರಾವರಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, 2001ರಿಂದ 2012ರ ಅವಧೀಯಲ್ಲಿ ಜಾರಿಯಲ್ಲಿದ್ದ ಜಲ ಸಂವರ್ಧನಾ ಯೋಜನೆ ಶೇ.95 ರಷ್ಟು ಯಶಸ್ಸು ಕಂಡಿದೆ. ಹೀಗಾಗಿ ಸಮುದಾಯ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಮತ್ತೆ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ವಿಶ್ವಬ್ಯಾಂಕ್ ನೆರವಿಗೆ ನಿರ್ಧಾರ: ಒಟ್ಟು ರು.2,500 ಕೋಟಿ ಧನ ಸಹಾಯವನ್ನು ವಿಶ್ವ ಬ್ಯಾಂಕ್ ಅಥವಾ ಜೈಕಾದಿಂದ ಪಡೆಯಲು ನಿರ್ಧರಿಸಲಾಗಿದೆ. ಇದಕ್ಕೆ ಸಂಪುಟ ಸಭೆಯ ಅನುಮೋದನೆ ಅಗತ್ಯವಾಗಿದೆ. 2001ರಿಂದ 2012ರ ಅವಧಿಯಲ್ಲಿ ರು.815 ಕೋಟಿಯನ್ನು ಈ ಯೋಜನೆಗೆ ನಿಗದಿಪಡಿಸಲಾಗಿದ್ದು, ರು.795 ಕೋಟಿ ಖರ್ಚಾಗಿದೆ. 18 ಜಿಲ್ಲೆಗಳಲ್ಲಿ 3,710 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಯೋಜನೆ ಪುನಾರಂಭಗೊಂಡರೆ ಪ್ರತಿ ವರ್ಷ ಸಾವಿರ ಕೆರೆಯಂತೆ 5,000 ಕೆರೆ ಅಭಿವೃದ್ಧಿಪಡಿಸಲು ನಿರ್ಧಾರ ತೆಗೆದುಕ್ಳೊಲಾಗಿದೆ ಎಂದು ತಿಳಿಸಿದರು. ಕೆರೆ ಅಭಿವೃದ್ಧಿ ಪ್ರಾಧೀಕಾರದಿಂದ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ 2,259 ಕೆರೆಗಳ ಒತ್ತುವರಿ ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
Advertisement