ಬಿಬಿಎಂಪಿಗೆ 4 ಸಾವಿರ ಪೌರಕಾರ್ಮಿಕರ ನೇಮಕ
ಬೆಂಗಳೂರು: ಕರ್ನಾಟಕ ಸಫಾಯಿ ಕರ್ಮಚಾರಿಗಳ ನಿಗಮ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬಿಬಿಎಂಪಿಗೆ ಪೌರ ಕಾರ್ಮಿಕರ ನೇಮಕ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಸಭೆ ಸಂದರ್ಭದಲ್ಲಿ ಈ ಸೂಚನೆ ನೀಡಿರುವ ಸಿದ್ದರಾಮಯ್ಯ, ಸದ್ಯದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 4000 ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ಹಾಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವವರಿಗೆ ಕಾನೂನು ಪ್ರಕಾರ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ನಗರಸಭೆ, ಪುರಸಭೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಪೌರ ಕಾರ್ಮಿಕರ ನೇಮಕ ಮಾಡುವ ಸಂದರ್ಭದಲ್ಲಿ ಹಾಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವವರಿಗೆ ಆದ್ಯತೆ ನೀಡಬೇಕು. ಅನುಭವ, ಅರ್ಹತೆ ಆಧರಿಸಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಸಭೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮೊದಲಾದವರು ಭಾಗವಹಿಸಿದ್ದರು.
ಪೌರಕಾರ್ಮಿಕರಿಗೆ ಫಾರಿನ್ ಟೂರ್...!
ಇಷ್ಟು ದಿನ ತಾವು ಮಾಡುವ ಕೆಲಸದಲ್ಲಿ ಬೆಂಗಳೂರು ಕಸದ ರಾಶಿಯನ್ನೇ ಕಾಣುತ್ತಿದ್ದ ಪೌರಕಾರ್ಮಿಕರಿಗೆ ವಿದೇಶ ನೋಡುವ ಸೌಭಾಗ್ಯ ಒದಗಿಬಂದಿದೆ. ಪೌರಕಾರ್ಮಿಕರನ್ನು ಒಂದು ಬಾರಿಯಾದರೂ ವಿದೇಶಕ್ಕೆ ಕಳುಹಿಸಿ, ಅಲ್ಲಿನ ಹೊಸ ವ್ಯವಸ್ಥೆ, ಸ್ವಚ್ಛತಾ ಕಾರ್ಯವನ್ನು ಪರಿಚಯಿಸಲು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಈ ಯೋಜನೆ ರೂಪಿಸಿದ್ದಾರೆ.
ಇದು ಕೈಗೂಡಿದಲ್ಲಿ ನಗರ ಸುತ್ತುತ್ತಿದ್ದ ಪೌರಕಾರ್ಮಿಕರಿಗೆ ವಿಮಾನದಲ್ಲಿ ಓಡಾಡುವ ಭಾಗ್ಯ ದೊರೆಯಲಿದೆ. ``ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ನಮ್ಮ ಮನವಿಯನ್ನು ಗಂಬಿsೀರವಾಗಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ ಇದೆ ಎಂದಿದ್ದಾರೆ'' ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ. `ಪೌರಕಾರ್ಮಿಕರ ಕೆಲಸ ಅತ್ಯಂತ ನಿಕೃಷ್ಟತೆಯಿಂದ ಕೂಡಿರುತ್ತದೆ.
ಕೆಲಸದಿಂದ ವೈಯಕ್ತಿಕ ಜೀವನವನ್ನೇ ಕಳೆದುಕೊಂಡಿರುತ್ತಾರೆ. ಸದಾ ಮ್ಯಾನ್ಹೋಲ್ನಲ್ಲಿ ಕೆಲಸ ಮಾಡುತ್ತ ಅಲ್ಲಿನ ದುರ್ನಾತಕ್ಕೆ ಸಾಕ್ಷಿಯಾಗಿರುತ್ತಾರೆ. ಇದರಿಂದಾಗಿ ಮದ್ಯಪಾನದ ಚಟಕ್ಕೂ ಬಿದ್ದಿರುವುದನ್ನು ನಾವು ನೋಡಿದ್ದೇವೆ. ಇಂತಹ ವ್ಯವಸ್ಥೆಯಲ್ಲಿರುವ ಪೌರಕಾರ್ಮಿಕರು ಇತರರಂತೆ ದೇಶ ವಿದೇಶ ಸುತ್ತಲು ಇದೊಂದು ಸದವಾಕಾಶವಾಗಿದ್ದು ನಮ್ಮ ಸರ್ಕಾರ ಜಾರಿಗೆ ತರಲು ಪ್ರಯತ್ನಿಸಲಿದೆ. ವಿದೇಶ ಪ್ರವಾಸದ ಖರ್ಚಿಗಾಗಿ ಪ್ರತಿ ಪೌರಕಾರ್ಮಿಕನಿಗೆ ಸರ್ಕಾರ ರು.2.5 ಲಕ್ಷ ವ್ಯಯಿಸಲಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ