ಬೆಂಗಳೂರು: ``ವಿದೇಶಗಳಲ್ಲಿ ಹೆಚ್ಚೆಂದರೆ ಎರಡು ಮೂರು ಬಗೆಯ ಸಂಸ್ಕೃತಿಗಳಿರುತ್ತವೆ. ಆದರೆ ವಿವಿಧತೆಯಿಂದ ಕೂಡಿರುವ ರಾಷ್ಟ್ರ- ದಲ್ಲಿ ವಿಭಿನ್ನ ಕಲೆ, ಸಂಸ್ಕೃತಿಗಳಲ್ಲಿ ಸಾಧನೆಗೈಯಲು ಅವಕಾಶವಿದೆ,'' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ಹೇಳಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ `2015-16ನೇ ಸಾಲಿನ ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ``ಯಾವ ನಾಡಿನಲ್ಲಿ ಕಲೆ, ಸಂಸ್ಕೃತಿಗಳಿಗೆ ಬೆಲೆ ಸಿಗು-ವುದೋ ಅಲ್ಲಿ ಉತ್ತಮ ಕೆಲಸಗಳು ನಡೆ-ಯಲು ಸಾಧ್ಯ,'' ಎಂದು ಅಭಿಪ್ರಾಯಪಟ್ಟರು.
``ಸಂಗೀತ ಅಕಾಡೆಮಿಯಲ್ಲಿ ಕಳೆದ 2-3 ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಶಸ್ತಿಗಳನ್ನು ಅರ್ಹರಿಗೆ ನೀಡುವ ಮೂಲಕ ಕಲಾವಿದರನ್ನು ಪೊ್ರೀತ್ಸಾಹಿಸಲಾಗುತ್ತಿದೆ. ಈ ಬಾರಿ ಸುಮಾರು 200ರಿಂದ 300 ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ಪಾರದರ್ಶಕ, ಪ್ರಾಮಾಣಿಕವಾಗಿ ಅರ್ಹರನ್ನು ಆಯ್ಕೆ ಮಾಡಲಾಗಿದೆ. ಕಲಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೈಯಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅರ್ಹರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತಿದೆ,'' ಎಂದು ತಿಳಿಸಿದರು.
ಹಿಂದೆ ಸರಿಯಬೇಡಿ: ಅಕಾಡೆಮಿಗಳು ಹಣಕಾಸಿನ ಕೊರತೆ ನೆಪ ಹೇಳಿ ಕಾರ್ಯಕ್ರಮದಿಂದ ಹಿಂದೆ ಸರಿಯಬೇಡಿ. ನಾಡಿನ ಕಲೆ, ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಇಲಾಖೆ ವತಿಯಿಂದ ಆರ್ಥಿಕ ಸಹಾಯ ನೀಡಲಾಗುವುದು ಎಂದು ಭರವಸೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಜಿ ನಿರ್ದೇಶಕ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ``ರಾಜ್ಯದಲ್ಲಿರುವ ವಿಶಿಷ್ಟ ಕಲೆಗಳು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಜಾನಪದ, ನೃತ್ಯ, ಶಿಲ್ಪಕಲೆ, ನಾಟಕ ಹೀಗೆ ಹಲವು ಕ್ಷೇತ್ರಗಳು ಭಿನ್ನತೆ, ವಿಶೇಷತೆಯಿಂದ ಕೂಡಿದ್ದು, ಸಂಪದ್ಭರಿತವಾಗಿವೆ,'' ಎಂದರು. ಡಾ. ಶ್ಯಾಮಲಾ ಜಿ. ಭಾವೆ ಮತ್ತು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ಉಪಸ್ಥಿತರಿದ್ದರು.
Advertisement