ಬೆಂಗಳೂರು: ಕಳೆದ 2014ರ ಡಿ.28ರಂದು ಸಂಭವಿಸಿದ ಬೆಂಗಳೂರಿನ ಚರ್ಚ್ಸ್ಟ್ರೀಟ್ ಸ್ಪೋಟಕ್ಕೆ ಸೋಮವಾರ ಒಂದು ವರ್ಷ ಕಳೆದಿದೆ. ಈ ಸ್ಪೋಟದಲ್ಲಿ ಮೃತಪಟ್ಟ ತಮಿಳುನಾಡು ಮೂಲದ ಭವಾನಿ ಅವರಿಗೆ ಕುಟುಂಬ ಸದಸ್ಯರು ಘಟನೆ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.
ಮೃತ ಭವಾನಿ ಅವರ ಪತಿ ಬಾಲನ್, ಸಹೋದರ ರಮೇಶ್ ಅವರು ಸ್ಪೋಟ ನಡೆದ ಸ್ಥಳದಲ್ಲಿ ಮೆಣದಬತ್ತಿ ಹಚ್ಚಿ ನೆನಪಿಸಿಕೊಂಡರು. ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪತಿ ಬಾಲನ್, ``ಇಂದಿಗೆ ನನ್ನ ಪತ್ನಿಯನ್ನು ಕಳೆದುಕೊಂಡು ವರ್ಷ ಕಳೆದಿದೆ. ಹೀಗಾಗಿ ನಾವು ಈ ಸ್ಥಳದಲ್ಲಿ ಶ್ಪದಾಟಛಿಂಜಲಿ ಸಲ್ಲಿಸುತ್ತಿದ್ದೇವೆ. ನನ್ನ ಮಕ್ಕಳು ನೊಂದಿಕೊಳ್ಳುತ್ತಾರೆಂಬ ಕಾರಣಕ್ಕಾಗಿ ಈ ವಿಚಾರವನ್ನು ಅವರಿಗೆ ಹೇಳಿಲ್ಲ'' ಎಂದು ಹೇಳುವಾಗ ಅವರ ಕಣ್ಣಾಲಿಗಳು ತೆವವಾಗಿದ್ದವು.
``ಕರ್ನಾಟಕ ಸರ್ಕಾರ ಘಟನೆ ನಡೆದಾಗ ನಮಗೆ ಬಹಳ ಸಹಾಯ ಮಾಡಿತು. ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಎಲ್ಲ ರೀತಿಯಲ್ಲೂ ನಮಗೆ ಸಹಾಯ ಮಾಡಿತ್ತು. ಪರಿಹಾರದ ಹಣ ರು.5 ಲಕ್ಷಕೂಡ ಸರ್ಕಾರ ನೀಡಿದೆ. ನಮಗಾದ ಸ್ಥಿತಿ ಬೇರೆ ಯಾರಿಗೂ ಆಗಬಾರದು. ದೇಶದ ಯಾವ ರಾಜ್ಯದಲ್ಲೂ ಈ ರೀತಿಯ ಘಟನೆ ಸಂಭವಿಸಬಾರದು'' ಎಂದು ಭಾವುಕರಾದರು.
Advertisement