ಬೆಂಗಳೂರು: ಕೆಎಂಎಫ್ ನಲ್ಲಿ ನಡೆಯುತ್ತಿರುವ ವ್ಯವಸ್ಥಾಪಕ ನಿರ್ದೇಶಕರ ಕುರ್ಚಿ ಕಚ್ಚಾಟ ಸೋಮವಾರ ಅಲ್ಲಿನ ಆಡಳಿತವನ್ನೇ ಕಂಗೆಡಿಸಿತು.
ಕೆಎಂಎಫ್ ನಲ್ಲಿ ಇರುವ ಏಕೈಕ ಎಂಡಿ (ವ್ಯವಸ್ಥಾಪಕ ನಿರ್ದೇಶಕ) ಹುದ್ದೆಗೆ ಇಬ್ಬರು ಹಿರಿಯ ಅಧಿಕಾರಿಗಳ ನೇಮಕವಾಗಿದ್ದು, ಆ ಇಬ್ಬರೂ ಒಂದೇ ಹುದ್ದೆಗೆ ಕಚ್ಚಾಟ ನಡೆಸಿದ್ದರು.
ಎಂಡಿ ಹುದ್ದೆಗೆ ಕೆಎಂಎಫ್ ನೇಮಿಸಿದ್ದ ರಾಮಲಿಂಗೇಗೌಡ ಮತ್ತು ಸರ್ಕಾರ ನೇಮಿಸಿದ ಐಎಎಸ್ ಅಧಿಕಾರಿ ಎಸ್.ಎನ್.ಜಯರಾಮ್ ನಡುವೆ ಪೈಪೋಟಿ ಆರಂಭವಾಗಿತ್ತು.ಈ ಇಬ್ಬರೂ ಪೈಪೋಟಿಯಿಂದ ಒಂದೇ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿ ಆಡಳಿತ ಗೊಂದಲಕ್ಕೆ ಕಾರಣರಾದರು.
ಏಕ ಕಾಲದಲ್ಲಿ ಈ ಇಬ್ಬರು ಕಾರ್ಯ ನಿರ್ವಹಿಸುತ್ತಿರುವುದರಿಂದ ಮಂಡಳಿ ಅಧಿಕಾರಿಗಳು, ಕಚೇರಿ ಸಿಬ್ಬಂದಿ ಯಾವ ಎಂಡಿ ಆದೇಶ ಪಾಲಿಸ ಬೇಕು? ಸಮಸ್ಯೆಗಳಿಗೆ ಯಾವ ಎಂಡಿ
ಅನುಮತಿ ಕೇಳಬೇಕೆಂದು ತಿಳಿಯದೆ ಬೆಪ್ಪಾಗಿದ್ದರು. ಇದರಿಂದ ಸಿಟ್ಟಿಗೆದ್ದ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು, ಸೋಮವಾರ ಎಂಡಿ ಕೊಠಡಿಯನ್ನೇ ಬಂದ್ ಮಾಡಿಸಿದ್ದರು. ಸರ್ಕಾರದಿಂದ ನೇಮಕವಾಗಿರುವ ಐಎಎಸ್ ಅಧಿಕಾರಿ ಜಯರಾಮ್ ಅವರಿಗೆ ಕೆಎಂಎಫ್ ಅಧ್ಯಕ್ಷರು ಮಂಡಳಿಯಲ್ಲಿ ಎಂಡಿ ಹುದ್ದೆ ಖಾಲಿ ಇಲ್ಲ ಎಂದೂ ಹೇಳಿದ್ದರು.
ಆದರೂ ಜಯರಾಮ್ ಕೆಎಂಎಫ್ ನಿಂದ ಕಾಲು ತೆಗೆಯಲಿಲ್ಲ. ಬದಲಾಗಿ ಅವರು ಸರ್ಕಾರದ ನೇಮಕ ಆದೇಶವನ್ನು ತೋರಿಸುತ್ತಾ ಕುರ್ಚಿಗೆ ಅಂಟಿಕೊಂಡಿದ್ದರು. ಈ ಮಧ್ಯೆ ಕೆಎಂಎಫ್ ನಿಂದ ನೇಮಕವಾಗಿರುವ ರಾಮಲಿಂಗೇಗೌಡ ಹೈ ಕೋರ್ಟ್ ಆದೇಶ, ಕೆಎಂಎಫ್ ನೇಮಕ ಆದೇಶ ಗಳನ್ನು ಕೈಯಲ್ಲೇ ಹಿಡಿದು ಕೆಲಸ ನಿರ್ವಹಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಸರ್ಕಾರದ ಆದೇಶವನ್ನು ಧಿಕ್ಕರಿಸಿ ದಿಟ್ಟ ನಿರ್ಧಾರ ಕೈಗೊಳ್ಳಲಾಗದೆ ಚಡಪಡಿಸಿದರು. ಹೈಕೋರ್ಟ್ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದರಿಂದ ಎಲ್ಲವೂ ತಿಳಿಯಾಯಿತು.
Advertisement