ಬೆಂಗಳೂರು: ಮಹಿಳೆಯೊಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆಗೈದು ಬಳಿಕ ತಾನು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನ್ಯೂ ತಿಪ್ಪಸಂದ್ರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಪ್ರದೀಪ್ ಎಂಬುವರ ಪತ್ನಿ ವಿಂಧ್ಯಾ(28) ಆತ್ಮಹತ್ಯೆ ಮಾಡಿಕೊಂಡವರು. ಯುಕೆಜಿ ಓದುತ್ತಿದ್ದ ಮಗ ಗಗನ್(5) ಹಾಗೂ ಎರಡೂವರೆ ವರ್ಷದ ಮಗಳು ಮೋನಿಷಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಐಟಿಸಿ ಕಂಪನಿಯಲ್ಲಿ ಮೇಲ್ವಿಚಾರಕನಾಗಿದ್ದ ಪ್ರದೀಪ್, ಇತ್ತೀಚೆಗೆ 2 ಸ್ವಂತ ಕಾರುಗಳನ್ನು ಖರೀದಿಸಿದ್ದರು. ಒಂದು ಕಾರನ್ನು ಆದಾಯ ತೆರಿಗೆ ಇಲಾಖೆಗೆ ಅಟ್ಯಾಚ್ ಮಾಡಿ ತಾವೇ ಚಲಾಯಿಸುತ್ತಿದ್ದರು. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಗೆ ಬಂದು ಬಾಗಿಲು ಬಂದಿದ್ದಾರೆ. ಎಷ್ಟೊತ್ತಾದರೂ ಬಾಗಿಲು ತೆಗೆಯದ ಕಾರಣ ಪತ್ನಿ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ. ಆದರೆ, ಮನೆ ಒಳಗೆ ಫೋನ್ ರಿಂಗ್ ಆಗುತ್ತಿತ್ತು.
ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯಿಸದ ಕಾರಣ ಅನುಮಾನಗೊಂಡು ಕಿಟಕಿಯಿಂದ ನೋಡಿದಾಗ ನೇಣಿನ ಕುಣಿಕೆಯಲ್ಲಿ ವಿಂಧ್ಯಾ ನೇತಾಡುತ್ತಿದ್ದಳು. ಇದರಿಂದ ಆಘಾತಗೊಂಡ ಪ್ರದೀಪ್, ಕಿರುಚಾಡಲು ಆರಂಭಿಸಿದ. ಕೂಡಲೇ ಸ್ಥಳೀಯರು ಆಗಮಿಸಿ ಮನೆ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದಾರೆ. ಕೊಠಡಿಯಲ್ಲಿ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿರುವ ಜೀವನ್ಭೀಮನಗರ ಪೊಲೀಸರು ಪತಿ ಪ್ರದೀಪ್ ಹಾಗೂ ಮಾರತ್ತಹಳ್ಳಿಯಲ್ಲಿರುವ ವಿಂಧ್ಯಾ ಸಹೋದರಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಂಧ್ಯಾ ಪಾಲಕರು ಮಡಿಕೇರಿಯಲ್ಲಿದ್ದು ನಗರಕ್ಕೆ ಆಗಮಿಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
Advertisement