

ಬೆಂಗಳೂರು: ಬೆಂಗಳೂರು-ಮೈಸೂರು ಹೈಸ್ಪೀಡ್ ರೈಲು ಯೋಜನೆ ಅಸಾಧ್ಯ ಎಂದು ಚೀನಾ `ರೈಲು' ಬಿಡುತ್ತಿದೆ, ಆದರೆ ಯೋಜನೆ ಸಾಧ್ಯ!
ಹೈಸ್ಪೀಡ್ ರೇಲ್ವೆ ಯೋಜನೆ ದುಬಾರಿಯಾಗುತ್ತದೆ, ಅದು ಸಾಧ್ಯವಿಲ್ಲ ಎಂದು ಚೀನಾ ರೈಲ್ವೆ ತಜ್ಞರು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ `ಮೆಟ್ರೋ ಮ್ಯಾನ್' ಎಂದೇ ಕರೆಯಲ್ಪಡುವ ಇ.ಶ್ರೀಧರನ್ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಯೋಜನೆಯನ್ನು ರು 11 ಸಾವಿರ ಕೋಟಿ ವೆಚ್ಚದಲ್ಲಿ ಪೂರೈಸಬಹುದು ಎಂದು ತಿಳಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಪಾಲು ಭರಿಸಿಕೊಂಡು ಅಥವಾ ಮೆಟ್ರೋ ಮಾದರಿಯಲ್ಲಿಯೇ 5 ವರ್ಷದೊಳಗೆ ಯೋಜನೆಯನ್ನು ಸಾಕಾರಗೊಳಿಸಬಹುದಾಗಿದೆ
ಎನ್ನುವುದು ಶ್ರೀಧರನ್ ವಾದವಾಗಿದೆ. ಭಾರತದ ರೈಲ್ವೆ ಸಂಪರ್ಕಗಳ ಬಗ್ಗೆ ಮೊದಲಿನಿಂದಲೂ ವರದಿ ನೀಡುತ್ತಿರುವ ಶ್ರೀಧರನ್ ಕಾಲಕಾಲಕ್ಕೆ ಸರ್ಕಾರಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಬಹು ನಿರೀಕ್ಷೆಯ ಹೈಸ್ಪೀಡ್ ರೈಲು ಯೋಜನೆ ಅಸಾಧ್ಯ ಎಂದು ಚೀನಾ ರಾಗ ಎಳೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅವರು, ಯೋಜನೆ ಅನುಷ್ಠಾನಕ್ಕೆ ಚೀನಾ ತಜ್ಞರ ಮಾತು ಕೇಳುವ ಅಗತ್ಯವೇನಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ರೈಲ್ವೆ ಬಜೆಟ್ನಲ್ಲಿ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಚೆನ್ನೈವರೆಗೆ ಹೈಸ್ಪೀಡ್ ರೇಲ್ವೆ ಯೋಜನೆ ಘೋಷಿಸಲಾಗಿತ್ತು.
ಪ್ರತಿ ಕಿ.ಮೀಗೆ ರು 100 ಕೋಟಿ: ಚೀನಾ ತಂತ್ರಜ್ಞರ ಮಾತುಗಳನ್ನು ಕೇಳುವ ಅಗತ್ಯವಿಲ್ಲ. ಬದಲಾಗಿ ಈ ಯೋಜನೆ ಸಂಬಂಧಿಸಿ ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ ಸುದೀರ್ಘ ಯೋಜನಾ ವರದಿ ಸಿದ್ಧಪಡಿಸಲು ತಯಾರಿದೆ. ಕೇವಲ 8-9 ತಿಂಗಳು ಅವಕಾಶ ನೀಡಿದರೆ ಯೋಜನೆಯ ನೀಲನಕ್ಷೆ ರೂಪಿಸಿ ಸರ್ಕಾರದ ಮುಂದಿಡಲಾಗುವುದು.
ಇದಕ್ಕೆ ಸಂಬಂಧಿಸಿ 2013ರ ಸೆಪ್ಟೆಂಬರ್ನಲ್ಲಿಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರು ವುದಾಗಿಯೂ ಶ್ರೀಧರನ್ ಅವರು ತಮ್ಮ ಹೊಸ ಪತ್ರದಲ್ಲಿ ವಿವರಿಸಿದ್ದಾರೆ.
ಬೆಂಗಳೂರು-ಮೈಸೂರಿನ ನಡುವೆ ಈಗ ಇರುವ ರೈಲ್ವೆ ಹಳಿಯು 130 ಕಿ.ಮೀ ದೂರವಿದೆ. ನೂತನ ಮಾರ್ಗದಿಂದ ಸುಮಾರು 20 ಕಿ.ಮೀ ಕಡಿಮೆ ಮಾಡಬಹುದಾಗಿದೆ. ಹೈಸ್ಪೀಡ್ ರೈಲಿಗೆ ಇದು ಅನಿವಾರ್ಯ ಕೂಡ. ಆದರೆ ಈ ಮಾರ್ಗವನ್ನು ಬುಲೆಟ್ ರೈಲಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಈ ಯೋಜನೆಗೆ ಕನಿಷ್ಠ 350 ಕಿ.ಮೀ ದೂರವಿರಬೇಕಾಗುತ್ತದೆ. ಏಕೆಂದರೆ ಬುಲೆಟ್ ರೈಲಿನ 350 ಕಿ.ಮೀ ಪ್ರತಿ ಗಂಟೆ ವೇಗ ತಲುಪಲು ಕನಿಷ್ಠ 45 ಕಿ.ಮೀ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಈ ವೇಗವನ್ನು ತಲುಪಲು ಸಾಧ್ಯವಿಲ್ಲ, ಮತ್ತೊಂದೆಡೆ ಇದರ ಅಗತ್ಯವೂ ಇಲ್ಲ. ಈ ಅಂತರಕ್ಕೆ ಪ್ರತಿ ಗಂಟೆಗೆ 200 ಕಿ.ಮೀ ವೇಗವಾಗಿ ಚಲಿಸುವ ರೈಲು ಸಾಕಾಗುತ್ತದೆ. ಇದರಿಂದ ಬೆಂಗಳೂರಿನಿಂದ ಮೈಸೂರಿಗೆ 40 ನಿಮಿಷದಲ್ಲಿ ಸಾಗಬಹುದಾಗಿದೆ.
ಈ ರೈಲ್ವೆ ಹಳಿ ನಿರ್ಮಾಣಕ್ಕೆ ಪ್ರತಿ ಕಿ.ಮೀಗೆ ರು. 90 ಕೋಟಿಯಿಂದ ರು. 100 ಕೋಟಿ ಬೇಕಾಗಬಹುದು. ಒಟ್ಟಾರೆ ಯೋಜನೆಯನ್ನು ರು. 11 ಸಾವಿರ ಕೋಟಿಯಲ್ಲಿ 5 ವರ್ಷದೊಳಗೆ ಮುಗಿಸಬಹುದು ಎನ್ನುವುದು ಶ್ರೀಧರನ್ ವಾದವಾಗಿದೆ.
Advertisement