ಹಿಂದು ಸಮಾಜೋತ್ಸವ: ತೊಗಾಡಿಯಾ, ಆಯೋಜಕರ ವಿರುದ್ಧ 3 ಕೇಸ್

ಹಿಂದು ಸಮಾಜೋತ್ಸವ
ಹಿಂದು ಸಮಾಜೋತ್ಸವ

ಬೆಂಗಳೂರು: ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿನ್ನೆ ನಡೆದ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ನಿಷೇಧದ ನಡುವೆಯೂ ವಿಶ್ವ ಹಿಂದು ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ಬಾಯಿ ತೊಗಾಡಿಯಾ ಅವರ ಮುದ್ರಿತ ಭಾಷಣದ ವಿಡಿಯೋವನ್ನು ಪ್ರಸಾರ ಮಾಡಿದ್ದ ಆರೋಪದ ಮೇಲೆ ತೊಗಾಡಿಯಾ ಸೇರಿ ಆಯೋಜಕರ ವಿರುದ್ಧ ಮೂರು ಪ್ರಕರಣ ದಾಖಲಿಸಲಾಗಿದೆ.

ಹಿಂದು ಸಮಾಜೋತ್ಸವ ಸಮಾರಂಭಕ್ಕೆ ತೊಗಾಡಿಯಾ ಅವರಿಗೆ ನಗರ ಪ್ರವೇಶ ಹಾಗೂ ವಿಡಿಯೋ ಕಾನ್ಫರನ್ಸ್ ಭಾಷಣಕ್ಕೆ ನಿರ್ಬಂಧ ಹೇರಲಾಗಿತ್ತು. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಯೋಜಕರು ತೊಗಾಡಿಯಾ ಅವರ 15 ನಿಮಿಷಗಳ ಮುದ್ರಿತ ಭಾಷಣದ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ 143, 180ರ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.

ಎರಡನೇ ಪ್ರಕರಣ
ಸಮಯ ಮೀರಿ ಸಮಾಜೋತ್ಸವವನ್ನು ನಡೆಸಿದ್ದ ಆಯೋಜಕರ ವಿರುದ್ಧ ಐಪಿಸಿ ಸೆಕ್ಷನ್ 188ರ ಅಡಿ ಕೇಸ್ ದಾಖಲಿಸಲಾಗಿದೆ. ಸಮಾಜೋತ್ಸವಕ್ಕೆ ಸಂಜೆ 4 ರಿಂದ 6 ಗಂಟೆಯವರೆಗೂ ಅನುಮತಿ ಪಡೆದಿದ್ದರು. ಆದರೆ ಆಯೋಜಕರು ರಾತ್ರಿ 8 ಗಂಟೆಯವರೆಗೂ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮೂರನೇ ಪ್ರಕರಣ
ನಿಷೇಧದ ನಡುವೆಯೂ ಸಮಾಜೋತ್ಸವದಲ್ಲಿ ತೊಗಾಡಿಯಾ ಅವರ 15 ನಿಮಿಷಗಳ ಮುದ್ರಿತ ಭಾಷಣದ ವಿಡಿಯೋವನ್ನು ಪ್ರಸಾರ ಮಾಡಿದ್ದರು. ಈ ವೇಳೆ ಕರ್ತವ್ಯ ನಿರತ ಪೊಲೀಸರು ವಿಡಿಯೋ ಪ್ರಸಾರವನ್ನು ತಡೆಯಲು ಹೋದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com