ಕಲ್ಲಿನಿಂದ ಜಜ್ಜಿ ಬಾಲಕನ ಕೊಲೆ

ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಿ.ಜೆ ಹಳ್ಳಿ ರೋಷನ್ ನಗರದಲ್ಲಿ ಬಾಲಕ ಗೌಸ್(16) ಎಂಬಾತನನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆಗೈದಿದ್ದಾರೆ. ಬುಧವಾರ ಬೆಳಗ್ಗೆ ರೋಷನ್ ನಗರ ಸಮೀಪದಲ್ಲೇ ಕಸ ಹಾಗೂ ಇತರ ತ್ಯಾಜ್ಯ ಬಿಸಾಡುವ ಹಳ್ಳದಂಥ ಜಾಗದಲ್ಲಿ ಶವ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕಲ್ಲಿನಿಂದ ತಲೆ ಹಾಗೂ ಮುಖ ಕ್ಕೆ ಜಜ್ಜಿ ಕೊಲೆಗೈದಿದ್ದಾರೆ. ಶವ ಪತ್ತೆಯಾದ ಜಾಗದಲ್ಲೇ ಕೊಲೆ ನಡೆದಿರುವ ಸಾಧ್ಯತೆ ಯಿದ್ದು, ಜಗಳವಾಗಿರುವ ಸುಳಿವು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.ಜೆ ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಗೌಸ್ 9ನೇ ತರಗತಿ ಓದುತ್ತಿದ್ದ. ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ಆದರೆ, ಆಗಾಗ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ.

ಹೊರಗೆ ಹೋದರೆ ಒಂದು ದಿನ, ಎರಡು ದಿನ ಬಿಟ್ಟು ವಾಪಸ್ ಬರುತ್ತಿದ್ದ. ಮಂಗಳವಾರ ರಾತ್ರಿಯೂ ಅಡುಗೆ ಕೆಲಸ ಇದೆ ಎಂದು ಹೇಳಿ ಹೋಗಿದ್ದ ಎಂದು ಪಾಲಕರು ತಿಳಿಸಿದ್ದಾರೆ. ಆದರೆ, ಬೆಳಗ್ಗೆ ಸಾರ್ವಜನಿಕರು ಶವ ಗಮನಿಸಿದ ನಂತರವೇ ಕೊಲೆ ನಡೆದಿರುವುದು ಗೊತ್ತಾಗಿದೆ. ಕೊಲೆ ನಡೆದ ಜಾಗಕ್ಕೂ, ಮನೆಗೂ ಕೇವಲ 500 ಮೀಟರ್ ಅಂತರವಿದೆ. ಆದರೆ, ಘಟನೆ ನಡೆದ ಜಾಗದಲ್ಲಿ ಬೀದಿದೀಪ ಇಲ್ಲ. ಮೋರಿ ಹರಿಯುತ್ತಿರುವುದರಿಂದ ಸಾರ್ವಜನಿಕರ ಓಡಾಟವೂ ಇರುವುದಿಲ್ಲ. ಹೀಗಾಗಿ ರಾತ್ರಿ ಜಗಳವಾಗಿರುವುದು ಯಾರ ಗಮನಕ್ಕೂ ಬಂದಿಲ್ಲ. ಗೌಸ್‍ನ ಸ್ನೇಹಿತರು ಅಥವಾ ಪರಿಚಿತರು ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com