ನಗರಕ್ಕೆ ನಾಳೆ ಮೋದಿ: ಭಾರಿ ಭದ್ರತೆ

ಏರೋ ಇಂಡಿಯಾ' ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದ್ದು..
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಬೆಂಗಳೂರು: ಯಲಂಹಕ ವಾಯುನೆಯಲ್ಲಿ ಫೆ. 18ರಿಂದ ಆರಂಭವಾಗಲಿರುವ `ಏರೋ ಇಂಡಿಯಾ' ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದ್ದು, ಅವರು ಸಂಚರಿಸುವ ಮಾರ್ಗಗಳಲ್ಲಿ ಹದ್ದಿನ ಕಣ್ಣಿಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಅಂದು ಬೆಳಗ್ಗೆ ಮೋದಿ ದೆಹಲಿಯಿಂದ ನೇರವಾಗಿ ಏರ್‍ಶೋ ನಡೆಯಲಿರುವ ಯಲಹಂಕ ವಾಯುನೆಲೆಗೆ ಬಂದಿಳಿಯಲಿದ್ದಾರೆ. ಏರ್‍ಶೋಗೆ ಚಾಲನೆ ನೀಡಿದ ನಂತರ ಹೆಬ್ಬಾಳದಲ್ಲಿರುವ ಜಿಕೆವಿಕೆ, ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಆಫ್ ಸೈನ್ಸ್ ಹಾಗೂ ನಿಮ್ಹಾನ್ಸ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಮತ್ತೆ ಎಚ್‍ಎಎಲ್‍ಗೆ ತೆರಳಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ವೇಳೆ ಯಾವುದೇ ಅನಾಹುತ ಸಂಭವಿಸದಂತೆ 1 ಸಾವಿರ ಹೋಂಗಾರ್ಡ್ಸ್, ಹೊರಜಿಲ್ಲೆಗಳಿಂದ 1300 ಸಿಬ್ಬಂದಿ, ಉಳಿದಂತೆ ಕೆಎಸ್ ಆರ್‍ಪಿ, ಸಿಎಆರ್, ಸೆಂಟ್ರಲ್ ಪೊಲೀಸ್ ಗುಪ್ತಚರ ದಳದ ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಉಳಿದಂತೆ ಫೆ.18 ರಿಂದ 22ರವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೆ ಅಗತ್ಯ ಭದ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮಂಗಳಯಾನ!
ವಿಜ್ಞಾನ ಲೋಕದಲ್ಲಿ ಭಾರತದ ಖ್ಯಾತಿಯನ್ನು ಉತ್ತುಂಗಕ್ಕೆ ಏರಿಸಿರುವ ಮಂಗಳಯಾನದ ನಾನಾ ಮುಖಗಳು ಇಸ್ರೋ ಹಾಗೂ ಎಚ್‍ಎಎಲ್ ಮಳಿಗೆಗಳಲ್ಲಿ ಕಾಣಿಸಲಿದೆ. ಜಿಎಸ್ ಎಲ್‍ವಿಯ 35 ಅಡಿಯ ಪ್ರತಿಕೃತಿ ಜತೆಗೆ ಮಂಗಳಯಾನದ ಸಂಪೂರ್ಣ ವಿವರವನ್ನು ಇಸ್ರೋ ನೀಡುತ್ತಿದೆ. ಇನ್ನು ಎಚ್ ಎಎಲ್ ಸಂಸ್ಥೆಯು ಮಂಗಳ ಗ್ರಹದ ಪರ್ಯಾವರಣವನ್ನು ಮರು ಸೃಷ್ಟಿ ಮಾಡಿ ಸಾರ್ವಜನಿಕರ ದರ್ಶನಕ್ಕೆ ಇಡುತ್ತಿದೆ. 1200 ಚ ಮೀಟರ್ ಜಾಗದಲ್ಲಿ ಮಂಗಳ ಗ್ರಹ ಹೋಲುವಂತಹ ವಾತಾವರಣ ಸೃಷ್ಟಿಸಲಾಗಿದೆ. ಭಾರತದ ಮಟ್ಟಿಗೆ ಪ್ರತಿ ವರ್ಷವೂ ಅಗ್ನಿ, ಪ್ರಥ್ವಿ, ತೇಜಸ್ ಹಾಗೂ ಬ್ರಹ್ಮೋಸ್ ಪ್ರಮುಖ ಆಕರ್ಷಣೆಯಾಗಿರುತ್ತಿತ್ತು. ಆದರೆ ಈ ಬಾರಿ ಮಂಗಳಯಾನವು ಏರೋ ಇಂಡಿಯಾ ಪ್ರದರ್ಶನದಲ್ಲಿ ಭಾರತದ ಮಟ್ಟಿಗೆ ದೊಡ್ಡ ಆಕರ್ಷಣೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com