ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೆಸರಲ್ಲಿ ಯಾರೋ ಅಪರಿಚಿತರು ಫೇಸ್ಬುಕ್ ಅಕೌಂಟ್ ತೆರೆದು ಇಲ್ಲ ಸಲ್ಲದ ಮಾಹಿತಿಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಆಪ್ತ ಸಹಾಯಕ ವಿ. ಶಿವಕುಮಾರ್ ಸಿಐಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನ ಹೆಸರಿನಲ್ಲಿ ಕೆಲವರು ಸಾಮಾಜಿಕ ತಾಣ(ಫೇಸ್ಬುಕ್) ತೆರೆದು ನನ್ನ ಘನತೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದ್ದು, ಸಾಮಾಜಿಕ ತಾಣದಿಂದ ನನ್ನ ವ್ಯಕ್ತಿತ್ವಕ್ಕೆ ಆಗುವ ಮುಜುಗರವನ್ನು ತಪ್ಪಿಸಬೇಕು. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಸಿಐಡಿ ಪೊಲೀಸರನ್ನು ಮನವಿ ಮಾಡಿರುವುದಾಗಿ ಶಿವಕುಮಾರ್ ತಿಳಿಸಿದ್ದಾರೆ.
ನಾನು ವೈಯಕ್ತಿಕವಾಗಿ ಯಾವುದೇ ಫೇಸ್ಬುಕ್ ಖಾತೆ ಹೊಂದಿಲ್ಲ. ಯಾರೋ ಅಪರಿಚಿತರು ಅಭಿಮಾನಿ ಬಳಗದ ಖಾತೆ ತೆಗೆದು ಇಲ್ಲ ಸಲ್ಲದ ಮಾಹಿತಿಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸಿಐಡಿ ಪೊಲೀಸರಿಗೆ ಇಂದು ತಮ್ಮ ಆಪ್ತ ಸಹಾಯಕ ವಿ.ಶಿವಕುಮಾರ್ ಅವರ ಮೂಲಕ ಜನಾರ್ಧನ್ ರೆಡ್ಡಿ ದೂರು ಸಲ್ಲಿಸಿದ್ದಾರೆ
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಈಗಾಗಲೇ ಜನಾರ್ಧನ್ ರೆಡ್ಡಿಯವರು ಮಾನಸಿಕವಾಗಿ ನೊಂದಿದ್ದಾರೆ. ಇದರ ನಡುವೆ ಫೇಸ್ಬುಕ್ನಲ್ಲಿ ಮತ್ತಷ್ಟು ಮನಸ್ಸಿಗೆ ನೋವು ಮಾಡುವಂತಹ ಕಾಮೆಂಟ್ಸ್ಗಳು ಅಪ್ಲೋಡ್ ಆಗುತ್ತಿರುವುದು ಬೇಸರ ತರಿಸಿದೆ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Advertisement