ಬೆಂಗಳೂರು: ಖಾತೆ ಮಾಡಿಸಿಕೊಡುವಲ್ಲಿ ವಿಫಲವಾಗಿದ್ದರಿಂದ ಏಕಸದಸ್ಯ ಪೀಠ ವಿಧಿಸಿದ್ದ ರು. 30 ಸಾವಿರ ದಂಡದಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಪೂರ್ವ ತಾಲೂಕಿನ ತಹಸೀಲ್ದಾರ್ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೈಕೋರ್ಟ್ ದಂಡದ ಮೊತ್ತವನ್ನು ರು.75 ಸಾವಿರಕ್ಕೆ ಏರಿಸಿದೆ.
ಜಮೀನಿಗೆ ಖಾತೆ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿ ಬೆಂಗಳೂರು ಪೂರ್ವ ತಹಸೀಲ್ದಾರ್ ಡಾ.ಬಿ.ಆರ್.ಹರೀಶ್ ನಾಯ್ಕ್ ಗೆ ಆದೇಶಿಸಿದ್ದರು. ಆದರೂ ಖಾತೆ ಮಾಡಿಸಿಕೊಡದೆ ವರ್ಷಗಟ್ಟಲೆ ಸಮಯ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ರವಿಕುಮಾರ್ ಸೇರಿ ಹಲವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ತಹಸೀಲ್ದಾರ್ ಗೆ ರು. 30 ಸಾವಿರ ದಂಡ ವಿಧಿಸಿ ಖಾತೆ ಮಾಡಿಸಿಕೊಡುವಂತೆ ಆದೇಶಿಸಿತ್ತು.
ಏಕಸದಸ್ಯ ಪೀಠ ವಿಧಿಸಿದ್ದ ರು. 30 ಸಾವಿರ ದಂಡವನ್ನು ಪ್ರಶ್ನಿಸಿ ತಹಶೀಲ್ದಾರ್ ಮೇಲ್ಮನವಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಕೆ.ಎಲ್.ಮಂಜುನಾಥ್ ಅವರಿದ್ದ ವಿಭಾಗೀಯ ಪೀಠ, ದಂಡದ ಮೊತ್ತವನ್ನು ರು. 75 ಸಾವಿರಕ್ಕೆ ಹೆಚ್ಚಿಸಿ, ಈ ಮೊತ್ತವನ್ನು ಅವರು ತಮ್ಮ ಜೇಬಿನಿಂದಲೇ ಭರಿಸಬೇಕು ಎಂದು ನಿರ್ದೇಶಿಸಿ, ಜಮೀನಿನ ಮಾಲೀಕರಿಗೆ ಖಾತಾ ಮಾಡಿಸಿಕೊಡಬೇಕು ಎಂದು ಆದೇಶಿಸಿದೆ.
ತಹಸೀಲ್ದಾರ್ ಪರ ಸರ್ಕಾರಿ ವಕೀಲರು ಸುಳ್ಳು ಮಾಹಿತಿ ನೀಡುತ್ತಾ ಕೋರ್ಟ್ ದಿಕ್ಕುತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ, ತಹಸೀಲ್ದಾರ್ ಪರವಾಗಿ ವಕಾಲತು ವಹಿಸಿ ಕೋರ್ಟ್ ಸಮಯ ಕೂಡ ವ್ಯರ್ಥ ಮಾಡಿದ್ದಾರೆ. ಈ ಕಾರಣಕ್ಕಾಗಿ ಕೋರ್ಟ್ ಹಾಲ್ನಿಂದ ಆ ಸರ್ಕಾರಿ ವಕೀಲರನ್ನು ಶೀಘ್ರ ಬದಲಾವಣೆ ಮಾಡುವಂತೆ ರಾಜ್ಯ ಅಡ್ವೊಕೇಟ್ ಜನರಲ್ ಅವರಿಗೆ ಇದೇ ವೇಳೆ ಪೀಠ ನಿರ್ದೇಶಿಸಿದೆ.
Advertisement