ಭಸ್ಮಾಸುರ ಕುಣಿತಕ್ಕೆ ನಾಶವಾಗಲಿರುವ ಬಿಜೆಪಿ

ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲೆಂದೇ ರಾಜ್ಯಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲೆಂದೇ ರಾಜ್ಯಕ್ಕೆ ಬಂದಿರುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ಮುಂದುವರಿಸಿದ್ದಾರೆ.

'ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ಕೃಪಾಕಟಾಕ್ಷದಿಂದ ದೋಷಮುಕ್ತರಾಗಿ ಹೊರಬಂದಿರುವ ಅಮಿತ್ ಶಾ ಅವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ' ಎಂದು ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕಾಂಗ್ರೆಸ್‌ಗೆ ಪಾಠ ಹೇಳುವ ನೈತಿಕತೆ ಬಿಜೆಪಿಯವರಿಗಿಲ್ಲ ಹಾಗೂ ಇಂತಹವರಿಂದ ಕಾಂಗ್ರೆಸ್ ಪಾಠ ಕಲಿಯಬೇಕಿಲ್ಲ. ರಾಜ್ಯದಲ್ಲಿ ಬಿಜೆಪಿ ಏಕೆ ಅಧಿಕಾರ ಕಳೆದುಕೊಂಡಿತು ಎನ್ನುವುದು ಜನರಿಗೆ ತಿಳಿದಿದೆ. ನಂ.1 ಭ್ರಷ್ಟಾಚಾರಿಗಳಾಗಿರುವ ಬಿಜೆಪಿಯವರಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಕೆಲವು ಮಂತ್ರಿಗಳು ಜೈಲುಪಾಲಾಗಿದ್ದರು. ಕೆಲವು ಮಂತ್ರಿಗಳು ಈಗಲೂ ಜೈಲಿನಲ್ಲೇ ಇದ್ದಾರೆ. ಆದರೆ ಒಂದೂವರೆ ವರ್ಷದಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಹಗರಣಗಳು ನಡೆದಿಲ್ಲ ಎಂದರು.

ಭಸ್ಮಾಸುರ

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಎಚ್.ವಿಶ್ವನಾಥ್, ಬಿಜೆಪಿಯವರು ಅರೆ ಹುಚ್ಚರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಸ್ಮಾಸುರ ಎಂದು ವ್ಯಂಗ್ಯವಾಡಿದರು.

ಪೂರ್ತಿ ಹುಚ್ಚರು ಸ್ವಲ್ಪ ಹೊತ್ತು ಕುಣಿದು ಆಮೇಲೆ ಸುಮ್ಮನಿರುತ್ತಾರೆ. ಆದರೆ, ಬಿಜೆಪಿಯವರು ಅರೆ ಹುಚ್ಚರಾಗಿದ್ದಾರೆ. ಭಸ್ಮಾಸುರನಂತೆ ಅಮಿತ್ ಶಾ ಕುಣಿಯುತ್ತಿದ್ದು, ಕೊನೆಗೆ ಭಸ್ಮಾಸುರ ಕುಣಿದು ಸುಟ್ಟು ಭಸ್ಮವಾದ ಪರಿಸ್ಥಿತಿ ಬರುತ್ತದೆ. ಅಮಿತ್ ಶಾ ಅವರು ಪರಿಸ್ಥಿತಿ ಬರುತ್ತದೆ. ಅಮಿತ್ ಶಾ ಅವರು ಹಾವಭಾವ ನೋಡಿದರೆ ಮಾರಮ್ಮ ದೇವಸ್ಥಾನದ ಪೂಜಾರಿಯಂತೆ ಕಾಣುತ್ತಾರೆ ಎಂದರು.

ಕಾಂಗ್ರೆಸ್ ಪಕ್ಷವೊಂದು ಸಂಸ್ಥೆಯಾಗಿ ಬೆಳೆದಿದೆ. ದೇಶದಿಂದ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡುವುದು ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಮಾಡುವುದಾಗಿ ಹೇಳುತ್ತಿರುವ ಬಿಜೆಪಿಯವರು, ಕಾಂಗ್ರೆಸ್ ನಾಯಕರಾದ ಸರ್ದಾರ್ ವಲ್ಲಭಾಯಿ ಪಟೇಲ್, ನೆಹರು, ಮಹಾತ್ಮಗಾಂಧೀಜಿ ಅವರ ಪಠಿಸುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡುವುದು ಬಿಜೆಪಿಯ ಭ್ರಮೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com