ಕೌನ್ಸಿಲರ್ ಹತ್ಯೆ ಪ್ರಕರಣ ಒಟ್ಟು 6 ಬಂಧನ

ರೌಡಿ ಪಟ್ಟಿಯಲ್ಲಿದ್ದ ಕೌನ್ಸಿಲರ್ ನಿಜಾಂ ಪಾಷ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಮಂದಿಯನ್ನು...
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ರಾಮನಗರ: ರೌಡಿ ಪಟ್ಟಿಯಲ್ಲಿದ್ದ ಕೌನ್ಸಿಲರ್ ನಿಜಾಂ ಪಾಷ ಹತ್ಯೆಗೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದರು.

ಕೃತ್ಯದಲ್ಲಿ 10 ಮಂದಿ ಭಾಗಿಯಾಗಿದ್ದರು. ಹತ್ಯೆ ಬಳಿಕೆ 4 ತಂಡಗಳಾಗಿ ವಿಂಗಡಣೆಗೊಂಡು ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದರು. ಪ್ರಮುಖ ಆರೋಪಿ ಅಬ್ದುಲ್ ಸಮದ್ ಜ.13ರಂದು ನ್ಯಾಯಾಲಯಕ್ಕೆ ಶರಣಾಗಿದ್ದ. ಉಳಿದವರ ಪತ್ತೆಗಾಗಿ 3 ತಂಡಗಳನ್ನು ರಚಿಸಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

ನೆಲಮಂಗಲದ ರೌಡಿ ಶೀಟರ್ ಮುಬಾರಕ್ ಅಲಿಯಾಸ್ ಬಟಿಷ್ಠ, ರಾಮನಗರದ ಇರ್ಫಾನ್ಖಾನ್ ಅಲಿಯಾಸ್ ಕಡುಬು, ಶಫಿ ಉಲ್ಲಾಖಾನ್, ವಸೀಂ ಅಕ್ರಮ ಅಲಿಯಾಸ್ ಪಿಳ್ಳು ಅವರನ್ನು ಹುಬ್ಬಳ್ಳಿಯಲ್ಲಿ, ಸಯ್ಯದ್ ಇಂತಿಯಾಜ್ ಅಲಿಯಾಸ್ ಖುರೂಫ್ ಮತ್ತು ವಸೀಂ ಪಾಷ ಅವರನ್ನು ಚಿಕ್ಕೋಡಿಯಲ್ಲಿ ಬಂಧಿಸಲಾಗಿದೆ ಎಂದರು.

ಕೊಲೆಯಾದ ನಿಜಾಂ ಪಾಷ ಹಾಗೂ ಆರೋಪಿ ಅಬ್ದುಲ್ ಸಮದ್ ಇಬ್ಬರೂ ಸ್ನೇಹಿತರಾಗಿದ್ದರು. 2006ರಲ್ಲಿ ಸಮದ್ ಸಹೋದರನ ಕೊಲೆ ನಡೆದಿತ್ತು. ಈ ಕೊಲೆ ಹಿಂದೆ ನಿಜಾಂಪಾಷ ಕೈವಾಡವಿದ್ದು, ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ಸಂದರ್ಭದಲ್ಲಿ ಇಬ್ಬರೂ ಮಾತಿನ ಚಕಮಕಿ ನಡೆಸುತ್ತಿದ್ದರು. ಹೀಗಾಗಿ ಇವರಿಬ್ಬರ ನಡುವೆ ವೈಮನಷ್ಯವಿದ್ದು, ಇದೇ ಕೊಲೆಗೆ ಪ್ರಮುಕ ಕಾರಣವಾಗಿದೆ ಎಂದರು.

ನಿಜಾಂ ಪಾಷ ವಿರುದ್ಧ ನಗರದ ಠಾಣೆಯಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ನಂತರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com