ಬೆಂಗಳೂರು: ಕೆ ಆರ್ ಮಾರುಕಟ್ಟೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಅಂಗಡಿಗಳನ್ನು ತಿಂಗಳಿಗೆ ೪೦೦ರೂಗಳಿಗೆ ಬಾಡಿಗೆಗೆ ಪಡೆದು ಅದನ್ನು ಮತ್ತೊಬ್ಬನ್ನಿಗೆ ೫೦೦೦೦ರೂ ಬಾಡಿಗೆಗೆ ಕೊಟ್ಟಿದ್ದರು ಎಂದಿದ್ದಾರೆ ಬಿಬಿಎಂಪಿ ಅಧಿಕಾರಿ ಬಿ ಆರ್ ನಂಜುಂಡಪ್ಪ.
ಮಾರುಕಟ್ಟೆಗೆ ಸಂಬಂಧಿಸಿದ ಬಿಬಿಎಂಪಿ ಸಮಿತಿ, ಕೆ ಆರ್ ಮಾರ್ಕೆಟ್ ನಲ್ಲಿ, ಹಲವಾರು ವರ್ಷಗಳಿಂದ ಬಾಡಿಗೆ ಒಪ್ಪಂದವನ್ನು ನವೀಕರಿಸದ ಆರು ಅಂಗಡಿಗಳನ್ನು ವಶಪಡಿಸಿಕೊಂಡು ಬೀಗ ಜಡಿದಿದ್ದಾರೆ. ಕಳೆದ ನವೆಂಬರ್ ನಲ್ಲೆ ಈ ಅಂಗಡಿ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿತ್ತು. ಈ ವಿಚಾರಣೆಯ ವೇಳೆಯಲ್ಲಿ ಅಂಗಡಿಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿರುವ ವಿಷಯ ಕೂಡ ತಿಳಿದು ಬಂದಿದೆ.
ನಂಜಪ್ಪ ಎಂಬುವವರಿಗೆ ೧೫x೧೨ ಚದರ ಅಡಿ ಅಂಗಡಿಯನ್ನು ಬಿಬಿಎಂಪಿ ೪೦೦ ರೂ ತಿಂಗಳ ಬಾಡಿಗೆಗೆ ಒಪ್ಪಂದವಾಗಿತ್ತು. ಆದರೆ ನಂಜಪ್ಪ ಮತ್ತೊಬ್ಬರಿಗೆ ಐವತ್ತು ಸಾವಿರ ರೂ ತಿಂಗಳ ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ನಂಜುಡಪ್ಪ ತಿಳಿಸಿದ್ದಾರೆ. "ನಾವು ಅಂಗಡಿಗೆ ಬೀಗ ಜಡಿಯಲು ಹೊರಟಾಗ ಅಲ್ಲಿನ ಹೊಸ ಮಾಲೀಕ ತಾನು ಐವತ್ತು ಸಾವಿರ ಬಾಡಿಗೆ ನೀಡುತ್ತಿದ್ದು ಅಂಗಡಿಯನ್ನು ಮುಚ್ಚಲು ಸಾಧ್ಯವಿಲ್ಲ ಎಂದರು. ಕರ್ನಾಟಕ ಮುನ್ಸಿಪಾಲ್ ಕಾರ್ಪೋರೇಶನ್ ನೀತಿಯ ಪ್ರಕಾರ, ಬಾಡಿಗೆದಾರ ಮತ್ತೊಬ್ಬರಿಗೆ ಅಂಗಡಿಗಳನ್ನು ಬಾಡಿಗೆ ನೀಡಲು ಸಾಧ್ಯವಿಲ್ಲ. ಆದುದರಿಂದ ನಾವು ಅಂಗಡಿಗೆ ಬೀಗ ಹಾಕಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
ಉಳಿದ ಅಂಗಡಿ ಮಾಲೀಕರು ತಮ್ಮ ಬಾಡಿಗೆ ಒಪ್ಪಂದವನ್ನು ಮುಂದಿನ ೧೫ ದಿನಗಳಲ್ಲಿ ನವೀಕರಿಸುವಂತೆ ಸಮಿತಿ ಸೂಚಿಸಿದೆ. ಇಲ್ಲದಿದ್ದರೆ ಬಾಡಿಗೆ ಒಪ್ಪಂದ ನವೀಕರಿಸದ ಎಲ್ಲ ಅಂಗಡಿಗಳನ್ನೂ ವಶಪಡಿಸಿಕೊಳ್ಳಲಾಗುತ್ತದೆ ಎಂದಿದ್ದಾರೆ.
"ಸದ್ಯಕ್ಕೆ ೬ ಅಂಗಡಿಗಳನ್ನು ವಶಪಡಿಸಿಕೊಂಡು ಬೀಗ ಹಾಕಿದ್ದೇವೆ. ಮುಂದಿನ ಏಳು ದಿನಗಳಲ್ಲಿ ಬಿಬಿಎಂಪಿ ಮಹಾನಿರ್ದೇಶಕ ಲಕ್ಷ್ಮಿನಾರಾಯಣ ಅವರ ಅನುಮತಿಯೊಂದಿಗೆ ಈ ಅಂಗಡಿಗಳನ್ನು ಇತರರಿಗೆ ವಹಿಸಿಕೊಡಲಾಗುತ್ತದೆ" ಎಂದು ನಂಜುಂಡಪ್ಪ ತಿಳಿಸಿದ್ದಾರೆ.
Advertisement