ಸೂರ್ಯರೈತ ಯೋಜನೆ ಶೀಘ್ರ ಜಾರಿ

ರೈತರಿಂದ ಜಮೀನನ್ನು ಬಾಡಿಗೆಗೆ ಪಡೆದು ಸೌರಶಕ್ತಿಯಿಂದ ವಿದ್ಯುತ್ ತಯಾರಿಸುವ `ಸೂರ್ಯರೈತ' ಯೋಜನೆಯನ್ನು...
ಸೌರಶಕ್ತಿ
ಸೌರಶಕ್ತಿ

ಬೆಂಗಳೂರು: ರೈತರಿಂದ ಜಮೀನನ್ನು ಬಾಡಿಗೆಗೆ ಪಡೆದು ಸೌರಶಕ್ತಿಯಿಂದ ವಿದ್ಯುತ್ ತಯಾರಿಸುವ `ಸೂರ್ಯರೈತ' ಯೋಜನೆಯನ್ನು ಇನ್ನು ನಾಲ್ಕೈದು ತಿಂಗಳೊಳಗೆ ಅನುಷ್ಠಾನಗೊಳಿಸಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಯೋಜನೆಗೆ ರೈತರು ಬಾಡಿಗೆ ಜಮೀನನ್ನು ನೀಡಲು ಮುಂದಾಗಿದ್ದಾರೆ. ಇದರಿಂದ ಈ ಬಾರಿ 20ರಿಂದ 30 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಎಫ್ ಕೆಸಿಸಿಐ ಶುಕ್ರವಾರ ಆಯೋಜಿಸಿದ್ದ 2015ರ ಹಸಿರು ಶೃಂಗಸಭೆ ಕುರಿತ ಕಾರ್ಯಕ್ರಮದಲ್ಲಿ ಅವರು ತಿಳಿಸಿದರು.
ಈ ಯೋಜನೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ. ಸರ್ಕಾರ ರಾಜ್ಯದಲ್ಲಿಯೇ  ಒಟ್ಟು 5 ಸಾವಿರ ಹಾಗೂ ಲಕ್ಷ ಸೋಲಾರ್ ಗ್ರಿಡ್‍ಗಳನ್ನು ದೇಶದಾದ್ಯಂತ ಅಳವಡಿಸಲು ನಿರ್ಧರಿಸಿದೆ. ಲಕ್ಷ ಎಕರೆ ಭೂಮಿಯನ್ನು ರಾಜ್ಯದ 11,700 ರೈತರು ಯೋಜನೆಗೆ ನೀಡಲು ಮುಂದಾಗಿದ್ದಾರೆ ಎಂದರು.
ರೈತರು ತಮ್ಮ ಸ್ವಂತ ಜಾಗದಲ್ಲಿ ಅವರೇ ಸ್ವತಃ ಸೋಲಾರ್ ಗ್ರಿಡ್ ಅಳವಡಿಸುವುದಾದರೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುತ್ತದೆ. ಅವರು ಬಳಸಿ, ಉಳಿದ ವಿದ್ಯುತ್ ಅನ್ನು ಸರ್ಕಾರ ಹಣ ನೀಡಿ ಖರೀದಿಸಲಿದೆ. ಇದರಿಂದ ಮಾಸಿಕ 5ರಿಂದ ರು. 6ಸಾವಿರ ಆದಾಯವೂ ರೈತರಿಗೆ ಲಭಿಸಲಿದೆ. ಈಗ ಉಷ್ಣಶಕ್ತಿ ಹಾಗೂ ಸೌರಶಕ್ತಿ ಬೆಲೆ ಒಂದೇ ರೀತಿಯಲ್ಲಿದೆ. ಆದರೆ ಮುಂದಿನ ದಿನಗಳಲ್ಲಿ ಉಷ್ಣ ಶಕ್ತಿ ಬೆಲೆ ಹೆಚ್ಚಲಿದ್ದು, ಸೌರಶಕ್ತಿ ಬೆಲೆ ಕಡಿಮೆಯಾಗುವ ಎಲ್ಲ ಸಾಧ್ಯತೆಗಳಿವೆ. ಎಲ್ಲರೂ ತಮ್ಮ ಮನೆಗಳಲ್ಲಿ ಸೌರಶಕ್ತಿಯನ್ನೇ ಬಳಸಬೇಕೆಂದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಸಿರು ಶೃಂಗ ಸಭೆ 2015ನ್ನು ಏಪ್ರಿಲ್ 23ರಿಂದ 25ರವರೆಗೆ ನಗರದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉದ್ಯಮದ ಬೆಳವಣಿಗೆ, ತಾಂತ್ರಿಕತೆ, ಮಾರುಕಟ್ಟೆ ಹಾಗೂ ನೀತಿ ರೂಪಿಸಲು ಸಮರ್ಥರನ್ನಾಗಿಸಲು ಸಹಾಯಕವಾಗಲಿದೆ ಎಂದು ಎಫ್ ಕೆಸಿಸಿಐ ಅಧ್ಯಕ್ಷ  ಎಸ್. ಸಂಪತ್ತರಾಮನ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಪವನಶಕ್ತಿ, ಜಲವಿದ್ಯುತ್, ಬಂದೋಬಸ್ತ್   ಹಾಗೂ ತ್ಯಾಜ್ಯ ವಸ್ತುಗಳಿಂದ ತಯಾರಾಗುವ ವಿದ್ಯುತ್, ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಗುತ್ತದೆ. ನವೀಕರಿಸಬಹುದಾದ ಇಂಧನ ಶಕ್ತಿಯ ಉದ್ಯಮದಲ್ಲಿ ನಿರತರಾಗಿರುವ ಹೂಡಿಕೆದಾರರಿಗೆ ಹಾಗೂ ಗ್ರಾಹಕರಿಗೆ ತಮ್ಮ ಸಂದೇಹಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ವೇದಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಕ್ರೆಡಲ್ ಅಧ್ಯಕ್ಷ ಶಶಿಕುಮಾರ್, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ.ರವಿಕುಮಾರ್, ಎಫ್ ಕೆಸಿಸಿಐ ಉಪಾಧ್ಯಕ್ಷ ತಲ್ಲಮ್ ಆರ್. ದ್ವಾರಕನಾಥ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com