ಮ್ಯಾನ್ ಹೋಲ್ ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು

ಮ್ಯಾನ್ ಹೋಲ್ ನಲ್ಲಿ ಬಿದ್ದಿದ್ದ ಇಟ್ಟಿಗೆ ಹಾಗೂ ಇತರೆ ಅಳಿದುಳಿದ ವಸ್ತುಗಳನ್ನು ಮೇಲೆತ್ತಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.
ಮ್ಯಾನ್ ಹೋಲ್(ಸಾಂದರ್ಭಿಕ ಚಿತ್ರ)
ಮ್ಯಾನ್ ಹೋಲ್(ಸಾಂದರ್ಭಿಕ ಚಿತ್ರ)

ಬೆಂಗಳೂರು: ನೂತನವಾಗಿ ನಿರ್ಮಾಣಗೊಂಡಿದ್ದ ಒಳಚರಂಡಿ ಮ್ಯಾನ್ ಹೋಲ್ ನಲ್ಲಿ ಬಿದ್ದಿದ್ದ ಇಟ್ಟಿಗೆ ಹಾಗೂ ಇತರೆ ಅಳಿದುಳಿದ ವಸ್ತುಗಳನ್ನು ಮೇಲೆತ್ತಲು ಒಳಗೆ ಇಳಿದ ಇಬ್ಬರು ಕಾರ್ಮಿಕರು ಮೃತಪಟ್ಟಿರುವ ಘಟನೆ ಯಲಹಂಕ ಉಪನಗರದ ಅಟ್ಟೂರು ಬಡಾವಣೆಯಲ್ಲಿ ನಡೆದಿದೆ.

ಕೋಲ್ಕತ್ತಾ ಮೂಲದ ಶಮೀಮ್ ಅಕ್ತರ್ (21 ) ಹಾಗೂ ಕಲಬುರಗಿ ಮೂಲದ ಶರಣಗೌಡ ಪಾಟೀಲ್(23 ) ಮೃತರು. ಇಲ್ಲಿನ ಕೆಂಪನಹಳ್ಳಿ ಮುಖ್ಯರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಐ.ವಿ.ಆರ್. ಸಿ.ಎಲ್ ಕಂಪನಿಗೆ ನೀಡಿತ್ತು. ಇದೇ ಕಾಮಗಾರಿಯನ್ನು ಐ.ವಿ.ಆರ್.ಸಿ.ಎಲ್  ಕಂಪನಿ ರಾಕೇಶ್ ಎಂಬುವವರಿಗೆ ಉಪಗುತ್ತಿಗೆ ನೀಡಿತ್ತು. ಸೆಪ್ಟೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿದ್ದು ಬಾಕಿ ಕೆಲಸ ನಡೆಯುತ್ತಿತ್ತು.

ಕೆಲಸ ಪೂರ್ಣಗೊಂಡಿದ್ದ ಕೆಲ ಮ್ಯಾನ್ ಹೋಲ್ ಗಳಲ್ಲಿ ಕಾಮಗಾರಿ ನಡೆಸುತ್ತಿದ್ದ ವೇಳೆ ಇಟ್ಟಿಗೆ ಸೇರಿದಂತೆ ಇತರೆ ಕಾಮಗಾರಿ ವಸ್ತುಗಳು ಬಿದ್ದಿದ್ದವು. ಅದನ್ನು ತೆಗೆಯುವಂತೆ ಗುತ್ತಿಗೆದಾರರು ಕಾರ್ಮಿಕರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸಲು ಅಕ್ತರ್ ಹಾಗೂ ಶರಣಗೌಡ ಆಗಮಿಸಿದ್ದರು. ಮೊದಲು ಮ್ಯಾನ್ ಹೋಲ್ ಗೆ ಇಳಿದ ಅಕ್ತರ್ ನಿರ್ವಾತ ಉಂಟಾಗಿ ಒಳಗೆ ಪ್ರಜ್ಞಾಹೀನನಾಗಿದ್ದ. ಎಷ್ಟೊತ್ತಾದರೂ ಆಟ ಹೊರಗೆ ಬಾರದ ಕಾರಣ ಗಾಬರಿಗೊಂಡ ಶರಣಗೌಡ ಅಕ್ತರ್ ನನ್ನು ಮೇಲೆಕ್ಕೆತ್ತಲು ಕೆಳಗೆ ಇಳಿದಿದ್ದಾನೆ. ಆದರೆ ಆತನೂ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.

ಸಾರ್ವಜನಿಕರಿಂದ ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ  ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com