ಬೆಂಗಳೂರು: "ರಾಜಿನಾಮೆಯೇ ಎಲ್ಲದಕ್ಕೂ ಉತ್ತರವಲ್ಲ, ಅದರಿಂದ ಪ್ರಯೋಜನವೂ ಇಲ್ಲ. ಈಗಾಗಲೇ ಕಾವೇರಿ ವಿವಾದ ವೇಳೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ರಾಜಿನಾಮೆ ನೀಡಿದೆ ಏನೂ ಆಗುವುದಿಲ್ಲ".
ಇದು ವಸತಿ ಸಚಿವ 'ರೆಬಲ್' ಅಂಬರೀಷ್ ಅವರ ಉತ್ತರ. ನಿಗಮ ಮಂಡಳಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕರ ನೇಮಕ ವಿಚಾರದಲ್ಲಿ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿ ಸಂಚಲನ ಮೂಡಿಸಿದ್ದ ಅವರು, ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ಸಿಎಂ ಸಿದ್ದರಾಮಯ್ಯ ಕೇವಲ ಒಂದು ಸಮುದಾಯದ ನಾಯಕರಲ್ಲ ಎಲ್ಲರ ಋಣ ಅವರ ಮೇಲಿದೆ ಎಂದು ಟಾಂಗ್ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬರಿಷ್, ಮಂಡ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಸಚಿವನಾಗಿದ್ದು ಏನು ಪ್ರಯೋಜನ ಅನ್ನಿಸಿತ್ತು. ಸರ್ಕಾರ ನನಗೆ ಸ್ಪಂದಿಸದಿದ್ದರಿಂದ ಬೇಸರವಾಗಿದೆ. ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ನಿಷ್ಠೆಯಿಂದ ಕೆಲಸ ಮಾಡಿದ್ದರೂ ಕಡೆಗಣಿಸಿದ್ದಕ್ಕೆ ಬೇಸರವಿದೆ. ಅದನ್ನು ಪತ್ರದ ಮೂಲಕ ಮುಖ್ಯಮಂತಿಗಳಿಗೆ ತಿಳಿಸಿದ್ದೇನೆ. ಅಸಮಾಧಾನವಿದ್ದ ಕಾರಣಕ್ಕೆ ರಾಜಿನಾಮೆ ನೀಡುತ್ತೇನೆ ಎನ್ನುವುದು ಸತ್ಯಕ್ಕೆ ದೂರ ಎಂದಿದ್ದಾರೆ.
ಈಗ ನಾನು ಅರ್ಹ: ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವ ವೇಳೆ ನಾನು ಸಚಿವನಾಗಲು ಅರ್ಹನಾಗಿದ್ದೆ. ಆದರೆ ಇಂದು ಸಚಿವನಾಗಳು ನಾನು ಅತ್ಯಂತ ಅರ್ಹ. ನನಗೆ ನೀಡಿರುವ ವಸತಿ ಇಲಾಖೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದೇನೆ. ಅತ್ಯಂತ ಚುರುಕಿನಿಂದ ಕೆಲಸ ಮಾಡುತ್ತಿದ್ದೇನೆ. ನನ್ನ ಇಲಾಖೆಗೆ ಸಂಬಂಧಪಟ್ಟ ಕಡತಗಳ ವಿಲೇವಾರಿ ಎಂದಿಗೂ ವಿಳಂಬವಾಗಿಲ್ಲ. ನನ್ನ ಟೇಬಲ್ ಮೇಲೆ ಯಾವುದೇ ಕಡತ ಐದು ನಿಮಿನಿಷವೂ ಇರುವುದಿಲ್ಲ. ಬಂದ ಕಡತಗಳನ್ನು ಆ ಕ್ಷಣದಲ್ಲಿಯೇ ವಿಲೇವಾರ್ತಿ ಮಾಡುತ್ತೇನೆ ಎಂದರು. ಅಪೆಕ್ಸ್ ವ್ಯಾಂಕ್ ನ ಅಧ್ಯಕ್ಷ ಸ್ಥಾನಕ್ಕೆ ಅಮರಾವತಿ ಚಂದ್ರಶೇಖರ್ ನನ್ನ ಆಯ್ಕೆಯಾಗಿದ್ದರು. ಆದರೆ ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ ಎಂದು ಅಂಬರೀಷ್ ಬೇಸರ ವ್ಯಕ್ತಪಡಿಸಿದ್ದಾರೆ.
Advertisement