
ಬೆಂಗಳೂರು: ಬಿಬಿಎಂಪಿಯನ್ನು 5 ಪಾಲಿಕೆಗಳಾಗಿ ಪುನಾರಚನೆ ಮಾಡಬೇಕೆಂದು ಮಾಜಿ ಮೇಯರ್ ಗಳ ಅಧ್ಯಯನ ಸಮಿತಿ ಶಿಫಾರಸು ಮಾಡಿದೆ.
ಮಾಜಿ ಸಚಿವ ಬಿಎಲ್ ಶಂಕರ್ ನೇತೃತ್ವದಲ್ಲಿ ಕಾಂಗ್ರೆಸ್ ರಚಿಸಿದ್ದ ಮಾಜಿ ಮೇಯರ್ ಗಳ ಸಮಿತಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಗೆ ಅಧ್ಯಯನ ವರದಿಯನ್ನು ಸಲ್ಲಿಸಿದೆ.
ಈ ವರದಿಯಲ್ಲಿ ಬಿಬಿಎಂಪಿಯನ್ನು ಮೂರು ರೀತಿಯ ಸುಧಾರಣೆ ಮಾಡಬಹುದು ಎಂದು ಶಿಫಾರಸುಗಳನ್ನು ಮಾಡಲಾಗಿದ್ದು, ಐದು ಪಾಲಿಕೆಗಳನ್ನುಪುನಾರಚಿಸಬೇಕೆನ್ನುವುದನ್ನೇ ಒತ್ತಿ ಹೇಳಲಾಗಿದೆ. ಸಮಿತಿ ಸದಸ್ಯರಾದ ಮಾಜಿ ಮೇಯರ್ ಗಳಾದ ಪಿ.ಆರ್ ರಮೇಶ್, ರಾಮಚಂದ್ರಪ್ಪ, ವಿಜಯ್ ಕುಮಾರ್, ಮುಮತಾಜ್ ಬೇಗಂ, ನಾರಾಯಣ ಸ್ವಾಮೀ ಸೇರಿದಂತೆ 9 ಮಂದಿ ಮತ್ತು ಸಲಹೆಗಾರರು ಈ ತನಕ ನಾಲ್ಕು ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತ ಸುಧಾರಣೆ ಮಾಡುವುದು. ಆ ನಿಟ್ಟಿನಲ್ಲಿ ಆಗಬೇಕಿರುವ ಬದಲಾವಣೆಗಳನ್ನು ಚರ್ಚಿಸಲಾಗಿತ್ತು. ಅಲ್ಲದೇ ನಗರದಲ್ಲಿ ಪಾಲಿಕೆಯಿಂದ ಉತ್ತಮ ಆಡಳಿತ ನೀಡಲು ವಿಭಜನೆ ಪರಿಹಾರವೇ ಅಥವಾ ಇರುವ ವ್ಯವಸ್ಥೆಉಅನ್ನು ಬದಲಾಯಿಸಿ ಸುಧಾರಿಸುವುದು ಸೂಕ್ತವೆ ಎನ್ನುವ ಬಗ್ಗೆಯೂ ಚರ್ಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಧ್ಯಯನ ವರದಿ ಸಿದ್ಧಪಡಿಸಿರುವ ಸಮಿತಿ ಪಾಲಿಕೆಯನ್ನು ಇರುವಂತೆಯೇ ಉಳಿಸಿಕೊಳ್ಳಬೇಕಾದರೆ 8 ವಲಯಗಳನ್ನು ಸಮಗ್ರವಾಗಿ ಬದಲಿಸಿ ಬಲಪಡಿಸಬೇಕೆಂದು ಹೇಳಿದೆ.
ಇದು ಬೇಡವಾದರೆ ಬಿಬಿಎಂಪಿಯನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸಿ ಆಡಳಿತವನ್ನು ಪ್ರತ್ಯೇಕಗೊಳಿಸಬೇಕೆಂದಿದ್ದರೂ ಐದು ಪಾಲಿಕೆಗಳ ರಚನೆಯನ್ನು ಒತ್ತಿ ಹೇಳಿರುವ ಸಮಿತಿ, ಐವರು ಮೇಯರ್ ಉಪಮೇಯರ್ ಅಗತ್ಯತೆಯನ್ನು ತಿಳಿಸಿದೆ. ಮೇಯರ್ ಅವಧಿ ಎಷ್ಟಿರಬೇಕೆನ್ನುವುದನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ.
Advertisement