ರಸಲ್ ಮಾರುಕಟ್ಟೆಯಲ್ಲಿ ಕಸ ಸುರಿದರೆ ಪರವಾನಗಿ ರದ್ದು
ಬೆಂಗಳೂರು: ರಸಲ್ ಮಾರುಕಟ್ಟೆಗೆ ತ್ಯಾಜ್ಯ ತಂದು ಸುರಿಯುವ ಹೋಟೆಲ್ ಮಾಲೀಕರಿಗೆ ದಂಡ ವಿಧಿಸುವುದರ ಜೊತೆಗೆ ವ್ಯಾಪಾರ ಪರವಾನಗಿ ರದ್ದು ಮಾಡಬೇಕು ಎಂದು
ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ತೀವ್ರ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ರಸಲ್ ಮಾರುಕಟ್ಟೆಗೆ ಭೇಟಿ ನೀಡಿದ ಆಯುಕ್ತರು ಸ್ವಚ್ಛತಾ ಕಾರ್ಯ ಪರಿಶೀಲಿಸಿದರು. ಈ ವೇಳೆ ಮಾರುಕಟ್ಟೆ ವ್ಯಾಪಾರಿಗಳು, ಸುತ್ತಲಿನ ಹೋಟೆಲ್ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಮಾರುಕಟ್ಟೆ ಯಲ್ಲಿ ಸುರಿಯಲಾಗುತ್ತಿದೆ. ತ್ಯಾಜ್ಯದ ರಾಶಿಯಿಂದ ಮಾಲಿನ್ಯ ಉಂಟಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಹೋಟೆಲ್ಗಳ ಹಸಿ ಕಸ ವಿಲೇವಾರಿಗೆ ಬಿಬಿಎಂಪಿಯಿಂದ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಹೋಟೆಲ್ ಮಾಲೀಕರು `ನೋಬಲ್ ಎಕ್ಸ್ಚೇಂಜ್' ಸಂಸ್ಥೆಂಯೊಂದಿಗೆ ಒಪ್ಪಂದ ಮಾಡಿಕೊಂಡು ಕಸ ವಿಲೇವಾರಿಗೆ ಈ ಹಿಂದೆಯೇ ನಿರ್ಧರಿಸಲಾಗಿತ್ತು. ಸಂಸ್ಥೆಗೆ ಕಸ ನೀಡದೆ ಚರಂಡಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಿದರೆ, ಅಂತಹ ಹೋಟೆಲ್ಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು ಹಾಗೂ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು. ಮಾರುಕಟ್ಟೆಯ ಮಳಿಗೆಗಳಲ್ಲಿ ಕಸ ಉಳಿಸಿಕೊಳ್ಳದೆ ನಿತ್ಯ ವಿಲೇವಾರಿ ಮಾಡಬೇಕು. ಕಸ ವಿಲೇವಾರಿಗೆ ಎಲ್ಲರೂ ಸಹಕರಿಸಬೇಕು. ಮಳಿಗೆಗಳ ಮುಂದೆ ಕಡ್ಡಾಯವಾಗಿ ಡಬ್ಬಗಳನ್ನಿಟ್ಟು ಕಸ ಸಂಗ್ರಹಿಸಬೇಕು. ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಸ್ವಚ್ಛ ವಾತಾವರಣ ಕಲ್ಪಿಸುವುದು ವ್ಯಾಪಾರಿಗಳ ಜವಾಬ್ದಾರಿ. ಪೌರಕಾರ್ಮಿಕರು ಕೂಡ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು.
ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ, ತುಟ್ಟಿಭತ್ಯೆ ಹಾಗೂ ಅಗತ್ಯ ಸಲಕರಣೆ ನೀಡದ ಗುತ್ತಿಗೆದಾರರ ವಿರುದಟಛಿ ಧೈರ್ಯವಾಗಿ ದೂರು ಸಲ್ಲಿಸಬೇಕು. ಪೌರಕಾರ್ಮಿಕರು ಹೋಟೆಲ್ಗಳಿಂದ ತ್ಯಾಜ್ಯ ಸಂಗ್ರಹಿಸಬಾರದು ಎಂದು ಸೂಚಿಸಿದರು. ಆಜಾದ್ ನಗರ, ವಾಲ್ಮೀಕಿನಗರದ ಬಂಡೆ ಗುಡಿಸಲು, ಗಾಂ„ನಗರ, ದೇವರಜೀವನಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ಆಜಾದ್ನಗರದಲ್ಲಿ ನಿರಂತರವಾಗಿ ಗೈರು ಹಾಜರಾದ ಆರೋಗ್ಯ ಪರಿವೀಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.