

ಬೆಂಗಳೂರು: ಕಪ್ಪು ಹೊಗೆ ಉಗುಳುವ ಬಸ್ಗಳನ್ನು ಗುರುತಿಸಿ ಸಂಸ್ಥೆಯ ಗಮನಕ್ಕೆ ತಂದರೆ ಒಂದು ಸಾವಿರ ಬಹುಮಾನ ನೀಡಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್ ಗಳನ್ನು ಕಾಲಕಾಲಕ್ಕೆ ತಪಾಸಣೆ ನಡೆಸಲಾಗುತ್ತಿದೆ. ಈ ನಡುವೆಯೂ ಕೆಲ ಬಸ್ಗಳು ಕಲುಷಿತ ಹೊಗೆ ಬಿಡುತ್ತಿವೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಹಾಗಾಗಿ ಅಂತಹ ವಾಹನ ಗುರುತಿಸಿ ಇಲಾಖೆ ಗಮನಕ್ಕೆ ತರುವ ಸಾರ್ವಜನಿಕರಿಗೆ ಬಹುಮಾನ ನೀಡಲಾಗುವುದು.
2014-15ನೇ ಸಾಲಿನಲ್ಲಿ ಕಲುಷಿತ ಹೊಗೆ ಉಗುಳುವ 1081 ಬಸ್ಗಳು ಪತ್ತೆಯಾಗಿವೆ. ಆ ವಾಹನಗಳನ್ನು ದುರಸ್ತಿಪಡಿಸಿ ವಾಯು ಮಾಲಿನ್ಯ ನಿಯಂತ್ರಣದಲ್ಲಿಡುವ ಬಗ್ಗೆ ಕ್ರಮಕ್ಕೆ ಸೂಚಿಸಲಾಗಿದೆ. 2015-16ರಲ್ಲಿ 14090 ಸಂಖ್ಯೆಯ ವಾಹನಗಳ ಹೊಗೆ ತಪಾಸಣೆ ನಡೆಸಲಾಗಿದೆ. ಅಲ್ಲದೆ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲಾ ಬಸ್ಗಳನ್ನು ಪ್ರತಿವರ್ಷ ತಪಾಸಣೆ ನಡೆಸಲಾಗುವುದು ಎಂದರು.
ಕಲುಷಿತ ಹೊಗೆ ಉಗುಳುವ ಬಸ್ ಪತ್ತೆಯಾದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು. ಕೇಂದ್ರ ಮೋಟಾರು ವಾಹನ ತಿಂಗಳಿಗೊಮ್ಮೆ ವಾಯುಮಾಲಿನ್ಯ ಪರಿಶೀಲಿಸಿ, ದೃಢೀಕರಣ ಪತ್ರ ಬಸ್ಗಳಲ್ಲಿ ಪ್ರದರ್ಶಿಸ ಲಾಗಿದೆ. ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಬಸ್ ನಿಲ್ದಾಣ, ಸೌರದೀಪ ಬಳಕೆ, ಎಥೆನಾಲ್ ಮಿಶ್ರಿತ ಡೀಸೆಲ್ ಬಳಕೆ ಪ್ರಾರಂಭಿಸಲಾಗಿದೆ ಎಂದರು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನ್ನು ಈಗಾಗಲೇ ನಿಷೇಧಿಸಿದ್ದರೂ ಸಂಪೂರ್ಣ ಜಾರಿಯಾಗಿಲ್ಲ. ಹಾಗಾಗಿ ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.
ಮೊದಲ ಹಂತದಲ್ಲಿ ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಕ್ರಮೇಣವಾಗಿ ಎಲ್ಲಾ ಜಿಲ್ಲೆಗಳಲ್ಲೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ನಡುವೆ ಕೆಎಸ್ಆರ್ಟಿಸಿಯ ಎಲ್ಲ ಘಟಕದಲ್ಲೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಕ್ರಮೇಣವಾಗಿ ನಿಷೇಧಿಸಲು ಕ್ರಮಕೈಗೊಳ್ಳಲಾಗುವುದು ಎಂದರು. ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರಕುಮಾರ್ ಕಟಾರಿಯಾ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸದಾಶಿವಯ್ಯ ಇದ್ದರು.
Advertisement