ಮಹಿಳೆಗೆ ಕಿರಿಕ್: ಟ್ರಸ್ಟಿಗೆ ಗೂಸಾ

ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ದೇವಸ್ಥಾನದ ಟ್ರಸ್ಟಿಯೊಬ್ಬರನ್ನು ಥಳಿಸಿದ ಸಾರ್ವಜನಿಕರು ರಾಜರಾಜೇಶ್ವರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ...
ಮಹಿಳೆಗೆ ಕಿರಿಕ್: ಟ್ರಸ್ಟಿಗೆ ಗೂಸಾ (ಸಾಂದರ್ಭಿಕ ಚಿತ್ರ)
ಮಹಿಳೆಗೆ ಕಿರಿಕ್: ಟ್ರಸ್ಟಿಗೆ ಗೂಸಾ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿದ ದೇವಸ್ಥಾನದ ಟ್ರಸ್ಟಿಯೊಬ್ಬರನ್ನು ಥಳಿಸಿದ ಸಾರ್ವಜನಿಕರು ರಾಜರಾಜೇಶ್ವರಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬೆಮೆಲ್ ಗೇಟ್ ಸಮೀಪದ ಶನಿ ಮಹಾತ್ಮ ದೇವಸ್ಥಾನದ ಟ್ರಸ್ಟಿ ಶಾಂತಿನಾಥ (56) ಬಂಧಿತ ವ್ಯಕ್ತಿ. ದೇವಸ್ಥಾನದ ಪೂಜಾ ಸಾಮಾನುಗಳನ್ನು ತೊಳೆದು ಶುಚಿಗೊಳಿಸಿದ ನಂತರ ಟ್ರಸ್ಟಿ ಮನೆಯಲ್ಲೇ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆಯ ಜತೆಗೆ ಶಾಂತಿನಾಥ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೇ, ಮೊಬೈಲ್ ಫೋನ್‍ನಲ್ಲಿ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಈತನ ಕಿಡಿಗೇಡಿತನದಿಂದ ನೊಂದ ಮಹಿಳೆ ತನ್ನ ಸಹೋದರ ಮತ್ತು ಇತರೆ ಮಹಿಳೆಯರಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ಭಾನುವಾರ ಸಂಜೆ ಮಹಿಳೆ ಸಹೋದರ ಹಾಗೂ ಸ್ಥಳೀಯರು ಶಾಂತಿನಾಥನನ್ನು ಹಿಡಿದು ಥಳಿಸಿ ಪೊಲೀಸ್ ಠಾಣೆಗೆ ಕರೆದೊಯ್ದು ಒಪ್ಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಪಿಎನ್‍ಎಸ್ ಖಿನ್ನತೆ: ವೃದ್ಧ ಆತ್ಮಹತ್ಯೆ
ಯಲಹಂಕ ಸಮೀಪದ ಹುಣಸಮಾರನಹಳ್ಳಿಯಲ್ಲಿ ದೊಡ್ಡ ಮುನಿಸ್ವಾಮಪ್ಪ (97) ಎಂಬುವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ಮೊಮ್ಮಗ ನಂಜುಂಡಸ್ವಾಮಿ ಎಂಬಾತ ಭಾನುವಾರ ಬೆಳಗ್ಗೆ 5 ಗಂಟೆಗೆ ಹಾಲು ತರಲು ಹತ್ತಿರದ ಅಂಗಡಿಗೆ ಹೋಗಿದ್ದರು. ಅವರು ಹಿಂದಿರುಗುವಷ್ಟರಲ್ಲಿ ದೊಡ್ಡಮುನಿಸ್ವಾಮಪ್ಪ ನೇಣು ಹಾಕಿಕೊಂಡಿದ್ದರು. ಹಿರಿಯ ಮಗ ಇತ್ತೀಚೆಗೆ ಅನಾರೋಗ್ಯದಿಂದ ಮೃತ ಪಟ್ಟಿದ್ದರಿಂದ ಹಾಗೂ ಮನೆಯ ಭೋಗ್ಯದ ಅವಧಿ ಮುಗಿದಿದ್ದರಿಂದ ಮನೆ ಬದಲಿಸಲು ನಿರ್ಧರಿಸಿದ್ದರಿಂದ ದೊಡ್ಡಮುನಿಸ್ವಾಮಪ್ಪ ತೀವ್ರ ಖಿನ್ನತೆಗೆ ಒಳಗಾಗಿದ್ದರು. ತಾನು ಇದೇ ಮನೆಯಲ್ಲಿ ಪ್ರಾಣ ಬಿಡಬೇಕು ಎಂದು ಆಗಾಗ ಹೇಳುತ್ತಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊಮ್ಮಗ ತಿಳಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com