ಸರ್ಕಾರದ ಭಾಗ್ಯದಿಂದ ಪ್ರಯೋಜನವಿಲ್ಲ: ಸಾಹಿತಿ ಕುಂ.ವೀ
ಬಳ್ಳಾರಿ: ನಮ್ಮ ರಾಜ್ಯದಲ್ಲಿ ಅನ್ನ ಸಿಗಲಾರದಷ್ಟು ಬಡತನವಿಲ್ಲ. ಭಾಗ್ಯ ಯೋಜನೆಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹಿರಿಯ ಕಾದಂಬರಿಕಾರ ಕುಂ.ವೀರಭದ್ರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದ ಇಂಥ ಭಾಗ್ಯ ಯೋಜನೆಗಳು ಉತ್ತಮ ಆಡಳಿತದ ಲಕ್ಷಣಗಳಲ್ಲ. ಬಡವರ ಹಸಿವು ರಾಜಕಾರಣಕ್ಕೆ ಬಳಕೆಯಾಗ ಬಾರದು. ಭಾಗ್ಯದ ಹಿಂದೆ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಬರುವವರಿಗೆ ಏನನ್ನೂ ಉಳಿಸುವಂತೆ ಕಾಣುತ್ತಿಲ್ಲ. ಎಲ್ಲ ಭಾಗ್ಯಗಳನ್ನೂ ಈ ಸರ್ಕಾರದಲ್ಲಿಯೇ ಅನುಷ್ಠಾನಗೊಳಿಸುವ ಲಕ್ಷಣಗಳು ಕಾಣಿಸುತ್ತಿವೆ ಎಂದರು. ವೋಟ್ ಬ್ಯಾಂಕ್ ಪ್ರೇರಿತ ಎಂದು ಹಿರಿಯ ಕಾದಂಬರಿಕಾರ ಸಾಹಿತಿ ಎಸ್.ಎಲ್. ಭೈರಪ್ಪ ಚಿಕ್ಕಮಗಳೂರಿನಲ್ಲಿ ಹೇಳಿರುವುದು ವರದಿಯಾಗಿದೆ. ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.
ಅನ್ನಭಾಗ್ಯದಂಥ ಕಾರ್ಯಕ್ರಮ ಜಾರಿಯಿಂದ ಯಾವುದೇ ಪ್ರಯೋಜನವಿಲ್ಲ. ತಮಿಳುನಾಡಿನಲ್ಲಿ ಇಂಥ ಭಾಗ್ಯಗಳನ್ನು ಜಾರಿಗೊಳಿಸಿದರೂ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಆದ್ಯತೆ ನೀಡಲಾಗಿದೆ. ಅದರಿಂದಾಗಿ ಶೇ. 60ರಷ್ಟು ಉದ್ಯೋಗ ದೊರೆತಿದೆ. ಆದರೆ, ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ಇನ್ನೂ ದೂರಾಗಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜ್ಯಪಾಲ ವಜುಭಾಯಿ ವಾಲಾ ಐಷಾರಾಮಿ ಜೀವನಕ್ಕೆ ರು.4 ಕೋಟಿ ಖರ್ಚು ಮಾಡಿದ್ದು ಬೇಸರದ ಸಂಗತಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನ ವಹಿಸಿರುವುದು ನೋಡಿದರೆ `ನೀ ನನಗಾದರೆ, ನಾ ನಿನಗೆ' ಎಂಬ ನೀತಿ ಅಡಗಿದಂತೆ ಕಾಣುತ್ತಿದೆ.
ಪ್ರಾಮಾಣಿಕ, ದಕ್ಷ ಮುಖ್ಯಮಂತ್ರಿಯಾಗಿದ್ದರೆ ಎದೆಗುಂದಬೇಕಾಗಿಲ್ಲ ಎಂದರು. ಇದಕ್ಕೂ ಮುನ್ನ ಮರ್ಚೇಡ್ ಸಭಾಂಗಣದಲ್ಲಿ ಪ್ರಜ್ಞೆ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕುಂವೀ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಗಳಿಸಿದ ಐವರು ವಿದ್ಯಾರ್ಥಿಗಳಿಗೆ ತಲಾ ರು. 10 ಸಾವಿರ ಪುರಸ್ಕಾರವನ್ನು ಕುಂ.ವೀ ವಿತರಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ