ಬೆಂಗಳೂರು: ಪಾರ್ಟಿ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ವೈಟ್ ಫೀಲ್ಡ್ ಸಮೀಪದ ವರ್ತೂರು ರಸ್ತೆಯಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಖಾಸಗಿ ಕಂಪೆನಿ ಉದ್ಯೋಗಿ ಶಿವರಾಜು (23) ಮೃತರು. ಅವರ ಜತೆ ಬೈಕ್ನಲ್ಲಿದ್ದ ಸ್ನೇಹಿತರಾದ ಜಯತೀರ್ಥ ಹಾಗೂ ಸಂತೋಷ್ ಎಂಬುವರು ಗಾಯಗೊಂಡಿದ್ದಾರೆ. ಮೂಲತಃ ಬಂಗಾರಪೇಟೆಯ ದೊಡ್ಡೂರಿನ ಶಿವರಾಜು ವೈಟ್ ಫೀಲ್ಡ್ ನಲ್ಲಿ ನೆಲೆಸಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಅವರು ಸೋಮವಾರ ಮುಂಜಾನೆ ಸ್ನೇಹಿತರ ಜತೆ ಬೈಕ್ನಲ್ಲಿ ಮಾರತ್ ಹಳ್ಳಿಯಿಂದ ವೈಟ್ ಫೀಲ್ಡ್ ಗೆ ಹೋಗುತ್ತಿದ್ದರು. ವರ್ತೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆ ಉಬ್ಬು ಗಮನಿಸದೆ ವೇಗವಾಗಿ ಚಾಲನೆ ಮಾಡಿದ್ದರಿಂದ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸ್ಥಳೀಯರು ಕೂಡಲೇ ಮೂವರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಶಿವರಾಜು ಮೃತಪಟ್ಟಿದ್ದು, ಮತ್ತಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಹೆಲ್ಮೆಟ್
ಧರಿಸದೆ ಇದ್ದ ಕಾರಣ ತಲೆಗೆ ಪೆಟ್ಟು ಬಿದ್ದು ಚಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement