ಬೆಂಗಳೂರು: ಗುಂಡಿ ಬಿದ್ದಿರುವ ರಸ್ತೆ ದುರಸ್ತಿಯಾಗಲು ಅದೆಷ್ಟು ವಾರಗಳು ಬೇಕು ಎಂದು ಸಿಲಿಕಾನ್ ಸಿಟಿ ಜನರಿಗೆ ಚನ್ನಾಗಿ ತಿಳಿದಿದೆ. ಅದಕ್ಕೇ ಯಾವುದೇ ರಸ್ತೆಯಲ್ಲಿ ಗುಂಡಿ ಬಿದ್ದರೂ ಬಹುತೇಕ ಮಂದಿ ಅಡ್ಜೆಸ್ಟ್ ಮಾಡಿಕೊಂಡು ಹೋಗುತ್ತಾರೆಯೇ ಹೊರತು ದೂರು ನೀಡುವ ಗೊಡವೆಗೆ ಹೋಗುವುದಿಲ್ಲ. ಆದರೆ ಇಲ್ಲೊಬ್ಬ ಕಲಾವಿದ ತನ್ನ ಕೈಚಳಕದಿಂದ ರಸ್ತೆ ದುರಸ್ತಿಯಾಗುವಂತೆ ಮಾಡಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದಲ್ಲಿ ಬೃಹದಾಕಾರದ ಹಳ್ಳ ಇದ್ದಿದ್ದನ್ನು ಗಮನಿಸಿದ ತ್ರಿಡಿ ಆರ್ಟಿಸ್ಟ್ ಬಾದಲ್ ನಂಜುಂಡಸ್ವಾಮಿ, ಹಳ್ಳದಲ್ಲಿ ನಿಜವಾದ ಜೀವವಿರುವಂತೆಯೇ ಕಾಣುವ ಮೊಸಳೆಯ ಆಕೃತಿಯನ್ನು ತಂದಿಟ್ಟು ಯಾವುದೇ ವಾಹನ ಸವಾರರು ಅತ್ತ ಹೋಗದಂತೆ ವಿನೂತನವಾಗಿ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ರಸ್ತೆಯಲ್ಲಿರುವ ಹಳ್ಳಗಳ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧ ಮೌನ ಪ್ರತಿಭಟನೆ ನಡೆಸಿದ್ದಾರೆ.
ಸುಮಾರು 6000 ವೆಚ್ಚದಲ್ಲಿ ಮೊಸಳೆ ಆಕೃತಿಯನ್ನು ತಯಾರಿಸಿದ ಬಾದಲ್ ನಂಜುಡಸ್ವಾಮಿ, ಅದನ್ನು ನೀರು ತುಂಬಿದ್ದ ಹಳ್ಳದಲ್ಲಿ ತಂದಿಟ್ಟಿದ್ದಾರೆ. ನಂತರ ಇದನ್ನು ಜನರು ಮೊಸಳೆ ಹೊಂಡ ಎಂದೇ ಕರೆಯಲು ಪ್ರಾರಂಭಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಒಂದೇ ದಿನದಲ್ಲಿ ರಸ್ತೆಯಲ್ಲಿದ್ದ ಹಳ್ಳವನ್ನು ಮುಚ್ಚಿದ್ದಾರೆ. ಒಬ್ಬ ಕಲಾವಿದನ ಕಾಳಜಿಯಿಂದ ಒಂದೇ ದಿನದಲ್ಲಿ ರಸ್ತೆ ದುರಸ್ತಿಯಾಗಿದೆ.
Advertisement
Advertisement