ವಿಧಾನಸಭೆ: ಚರ್ಚ್ ಸ್ಟ್ರೀಟ್ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ಕೊನೆಗೂ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಕಟ್ಟುನಿಟ್ಟಿನ ಎಚ್ಚರಿಕೆ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ತನ್ನಿಂದ ತನಿಖೆ ನಡೆಸಲು ಅಸಾಧ್ಯ ಎಂದು ಕೈಚೆಲ್ಲಿದೆ. ತನಿಖಾ ಜವಾಬ್ದಾರಿಯನ್ನು ಎನ್ಐಎಗೆ ವಹಿಸಲು ಆರಂಭದಲ್ಲಿ ರಾಜ್ಯ ಸರ್ಕಾರ ನಿರಾಕರಿಸಿದ್ದರೂ ಈಗ ತಮ್ಮಿಂದ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ, ಯಾವುದೇ ಬಂಧನವೂ ಆಗಿಲ್ಲ ಎಂದು ರಾಜ್ಯ ಸರ್ಕಾರ ಹತಾಶೆಯ ಉತ್ತರ ನೀಡಿದೆ.
ವಿಧಾನಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೃಹ ಸಚಿವ ಕೆ.ಜೆ.ಜಾರ್ಜ್ ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸುವುದನ್ನು ಖಾತ್ರಿ ಮಾಡಿದ್ದಾರೆ. ಕಳೆದ ಡಿ.28ರಂದು ಬೆಂಗಳೂರಿನ ಚರ್ಚ್ಸ್ಟ್ರೀಟ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಒಬ್ಬ ಮಹಿಳೆ ಸತ್ತು, ಮೂವರು ಗಾಯಗೊಂಡಿದ್ದರು. ಘಟನೆ ನಡೆದು ಮೂರು ತಿಂಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ. ಈ ಬಗ್ಗೆ ರಾಜ್ಯಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಕೂಡ ಪ್ರಸ್ತಾಪಿಸಿದ್ದರು.
ರಾಜ್ಯ ಪೊಲೀಸರ ತನಿಖಾ ಕ್ರಮಕ್ಕೆ ಗೃಹ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದ ರಾಜನಾಥ್ ಸಿಂಗ್, ಇನ್ನೊಂದು ತಿಂಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸಲು ರಾಜ್ಯ ವಿಫಲವಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡ ಸಚಿವ ಜಾರ್ಜ್, `ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ಶೀಘ್ರವಾಗಿ ತನಿಖೆಯ ಪೂರ್ಣ ಜವಾಬ್ದಾರಿಯನ್ನು ಎನ್ಐಎಗೆ ವಹಿಸಲಾಗುವುದು. ಅಂತರ್ ರಾಜ್ಯಗಳಿಗೆ ಸಂಬಂಧಿಸಿ ತನಿಖೆಯಾಗಿರುವುದರಿಂದ ನಮ್ಮ ಪೊಲೀಸರಿಗೆ ಪ್ರಕರಣ ಭೇದಿಸುವುದು ಕಷ್ಟವಾಗುತ್ತಿದೆ' ಎಂದು ಹೇಳಿದರು.
ಪಾಕ್ನಲ್ಲಿ 4 ಯುವಕರಿಗೆ ತರಬೇತಿ!: ರಾಜ್ಯದ ನಾಲ್ವರು ಯುವಕರು ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆಸಲು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ. ಇವರೆಲ್ಲರೂ ಪೊಲೀಸರ ವಶದಲ್ಲಿದ್ದಾರೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಶಾಸಕ ಸುನೀಲ್ಕುಮಾರ್ ಪ್ರಶ್ನೆಗೆ ಉತ್ತರಿಸಿದ್ದಾರೆ.
ಯಾಸೀನ್ ಭಟ್ಕಳ್, ಅಬ್ದುಲ್ ಹಕೀಮ್, ಡಾ. ಜಾಫರ್ ಇಕ್ಬಾಲ್ ಶೋಲಾಪ್ಮರ, ಸಯ್ಯದ್ ಇಸ್ಮಾಯಿಲ್ ಅಫಕ್ ಲಂಕಾ ಎಂಬ ನಾಲ್ವರು ಉಗ್ರರು ಪಾಕ್ನಲ್ಲಿ ತರಬೇತಿ ಪಡೆದಿರುವುದು ತನಿಖೆಯಿಂದ ತಿಳಿದಿದೆ. ಇವರ ಹಿಂದೆ ಇರುವ ಸಂಘಟನೆಗಳ ಕುರಿತ ಮಾಹಿತಿ ಇನ್ನೂ ಬಂದಿಲ್ಲ. ರಾಜ್ಯದ ಯಾವುದಾದರೂ ಸಂಘಟನೆ ಉಗ್ರರ ಬೆಂಬಲಕ್ಕೆ ನಿಂತಿರುವ ಬಗ್ಗೆ ತನಿಖೆಯಿಂದ ಗೊತ್ತಾಗಬೇಕು ಎಂದು ತಿಳಿಸಿದ್ದಾರೆ.
Advertisement