ಬೆಂಗಳೂರು: ಜಾತಿ ಗಣತಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ. ಇದನ್ನು ಸಚಿವ ಸಂಪುಟ ತೀರ್ಮಾನಿಸಿದ್ದು, ಇದರ ಬಗ್ಗೆ ವಿರೋಧ ಅಂಶಗಳನ್ನು ಹೇಳುವುದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಇತ್ತೀಚೆಗಷ್ಟೆ ಸಚಿವ ಅಂಬರೀಷ್ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗಷ್ಟೆ ಜಾತಿ ಗಣತಿ ಕುರಿತು ಸಚಿವ ಅಂಬರೀಷ್ ಅವರು ಹೇಳಿಕೆಯೊಂದನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಯಿಸಿರುವ ಸಚಿವ ಆಂಜನೇಯ, ಸಚಿವ ಅಂಬರೀಷ್ ಸಹಜವಾಗಿ ಮಾತಾಡುತ್ತಾರೆ. ಎಲ್ಲೋ ಬೆರಳೆಣಿಕೆಯಷ್ಟು ಜನ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರಬಹುದು. ಹಾಗಂತ, ಈ ರೀತಿ ಮಾತಾಡೋದು ಸರಿಯಲ್ಲ ಎಂದು ಅಂಬರೀಷ್ ಅವರ ಹೇಳಿಕೆಗೆ ಆಂಜನೇಯ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಸಪ್ತಗಿರಿ ವೈದ್ಯಕೀಯ ಕಾಲೇಜು ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಸಚಿವ ಆಂಜನೇಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳು ದೇವರಿಲ್ಲದ ಗುಡಿಯಾಗಿದೆ. ತಜ್ಞ ವೈದ್ಯರು ಭಾರತದಿಂದ ವಿದೇಶಕ್ಕೆ ಮಾರಾಟವಾಗುತ್ತಿದ್ದಾರೆ. ಹಳ್ಳಿಯಲ್ಲಿ ಜನರ ಸೇವೆ ಮಾಡಲು ವೈದ್ಯರು ಮುಂದಾಗುತ್ತಿಲ್ಲ. ಶ್ರೀಮಂತರ ಸೇವೆ ಮಾಡಲು ಇಷ್ಟಪಡುತ್ತಾರೆ ಹೊರತು, ಸರ್ಕಾರ ಸೇವೆ ಅಥವಾ ಬಡವರ ಸೇವೆ ಮಾಡಲು ಮುಂದಾಗುತ್ತಿಲ್ಲ. ವೈದ್ಯ ವೃತ್ತಿ ವ್ಯಾಪಾರ ವೃತ್ತಿಯಾಗಿದೆ ಎಂದು ವಿಷಾಧಿಸಿದರು.
ವೈದ್ಯರು ಹೃದಯ ಶ್ರೀಮಂತಿಕೆಯನ್ನು ತೋರಿಸುವಂತಹ ಅಗತ್ಯವಿದೆ. ಇದರಲ್ಲಿ ಮಾಧ್ಯಮಗಳು ಪಾತ್ರವಹಿಸಬೇಕು. ಪತ್ರಕರ್ತರ ಸಂಘ ಕೊಳಗೇರಿಯೊಂದನ್ನು ದತ್ತು ತೆಗೆದುಕೊಂಡು ಉಚಿತ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸಲಹೆ ನೀಡಿದರು.
Advertisement