ಕೊಳ್ಳೆಗಾಲ: ತಮಿಳುನಾಡಿನ ಐವರು ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ.
ಕೊಳ್ಳೆಗಾಲದ ಹರವೆ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತಮಿಳುನಾಡಿನ ಧರ್ಮಪುರಿ ನಿವಾಸಿಗಳಾದ ಶಿವಮ್ಮ (35), ರಾಜೇಂದ್ರ (43), ರೋಜ (12), ಕಾಶಿ (40) ಮತ್ತು ರಾಜಮ್ಮ (33) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಮೃತ ರಾಜೇಂದ್ರ ಮೇಸ್ತ್ರಿ ಕೆಲಸದವನಾಗಿದ್ದು, ತಮಿಳುನಾಡಿನಿಂದ ಕಳೆದ 6 ತಿಂಗಳ ಹಿಂದೆ 20 ಜನರ ತಂಡವನ್ನು ಕುಂತೂರು ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಕಡಿಯಲು ಗುತ್ತಿಗೆ ಆಧಾರದ ಮೇಲೆ ಕರೆತಂದಿದ್ದನು. ಈ ತಂಡ ಹರವೆ ಗ್ರಾಮದ ಶ್ರೀನಿವಾಸ್ ಎಂಬುವರ ತೋಟದ ಮನೆಯಲ್ಲಿ ವಾಸವಿದ್ದು, ಮುದ್ದು ಮಾದೇಗೌಡ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ಕೆಲಸದಲ್ಲಿ ತೊಡಗಿದ್ದರು.
ನಿನ್ನೆ ಸಂಜೆ ಮುದ್ದು ಮಾದೇಗೌಡರ ಜಮೀನಿನಲ್ಲಿ ಕಬ್ಬು ಕಟಾವು ಮಾಡಿ ರಾತ್ರಿ ಶ್ರೀನಿವಾಸ್ರವರ ತೋಟದ ಮನೆಯಲ್ಲಿ ತಂಗಿದ್ದರು. ರಾಜಮ್ಮ ಹಾಗೂ ಮೇಸ್ತ್ರಿ ರಾಜೇಂದ್ರ ನಡುವೆ ಅನೈತಿಕ ಸಂಬಂಧವಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ.
ಕುಡಿದ ಅಮಲಿನಲ್ಲಿ ಜಗಳ ವಿಕೋಪಕ್ಕೆ ತಿರುಗಿ ಮಚ್ಚಿನಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಐವರನ್ನು ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆ ಮಾಡಲಾಗಿದೆ.
ಕೊಲೆ ಮಾಡಿದ ನಂತರ 15 ಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ. ರಾಜೇಂದ್ರ ಮತ್ತು ರಾಜಮ್ಮ ದೇಹಗಳು ಒಂದು ಶೆಡ್ಡಿನಲ್ಲಿ ಪತ್ತೆಯಾಗಿದ್ದು, ಮತ್ತೊಂದು ಶೆಡ್ಡಿನಲ್ಲಿ ರಾಜಮ್ಮನವರ ಮಗಳು ರೋಜ, ಕಾಶಿ ಹಾಗೂ ಕಾಶಿ ಪತ್ನಿ ಶಿವಮ್ಮನವರ ಶವಗಳು ಕಂಡುಬಂದಿವೆ.
ಶವಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಕೊಳ್ಳೆಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಚುರುಕುಗೊಂಡಿದೆ ಎಂದು ಮೂಲಗಳು ತಿಳಿಸಿವೆ.
Advertisement