ಬೆಂಗಳೂರು: ಮಳೆಗಾಲಕ್ಕೆ ಸಿದ್ದತೆ ನಡೆಸಿರುವ ಬಿಬಿಎಂಪಿ, ಗ್ಯಾಂಗ್ ಮನ್ಗಳ ತಂಡ ಹಾಗೂ ನಿಯಂತ್ರಣ ಕೊಠಡಿಗಳನ್ನು ಸಜ್ಜುಗೊಳಿಸುತ್ತಿದೆ.
ಮಳೆಗಾಲದಲ್ಲಾಗುವ ಅನಾಹುತಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಲ್ಲ ವಲಯಗಳಿಗೆ ಸೂಚನೆ ನೀಡಿರುವ ಆಯುಕ್ತ ಜಿ. ಕುಮಾರ್ ನಾಯಕ್, ಅರಣ್ಯ ವಿಭಾಗದ ಸಿಬ್ಬಂದಿ ನಿಯಂತ್ರಣ ಕೊಠಡಿಯ ಪ್ರಹರಿ ವಾಹನ ಹಾಗೂ ಸಲಕರಣೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಪ್ರತಿ ಬಾರಿಯ ಮಳೆಗಾಲದಲ್ಲಿ ಮರಗಳು ಉರುಳುವುದು, ರಸ್ತೆಗಳಲ್ಲಿ ನೀರು ನಿಲ್ಲುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಹಲವು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಎಲ್ಲ ಸಿಬ್ಬಂದಿ ಪರಿಹಾರ ಕಾರ್ಯಕ್ಕೆ ಸಿದ್ಧವಾಗಿರಬೇಕು ಎಂದು ಸೂಚಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನ 24 ಗಂಟೆ ಕಾರ್ಯನಿರ್ವಹಿಸುವ 10 ನಿಯಂತ್ರಣ ಕೊಠಡಿಗಳಿದ್ದು, ಸಾರ್ವಜನಿಕರಿಂದ ಸ್ವೀಕರಿಸಿದ ದೂರುಗಳನ್ನು ವೈರ್ಲೆಸ್ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಬೇಕು. 13 ಪ್ರಹರಿ ವಾಹನ ಹಾಗೂ 130 ಗ್ಯಾಂಗ್ಮನ್ ಗಳಿದ್ದು, ಸದಾ ಸಜ್ಜಾಗಿರಬೇಕು. ಅರಣ್ಯ ಘಟಕದಲ್ಲಿ ಮರ ಕಡಿಯುವ 13 ತಂಡಗಳಿದ್ದು, ಪ್ರತಿ ತಂಡದಲ್ಲಿ 8ರಂತೆ ಒಟ್ಟು 124 ಗ್ಯಾಂಗ್ಮನ್ಗಳಿದ್ದಾರೆ. ಮಳೆಯಿಂದಾಗಿ ಮರಗಳು ಬಿದ್ದರೆ, ಕೂಡಲೇ ಸ್ಥಳಕ್ಕೆ ಧಾವಿಸಿ ಒಂದು ಗಂಟೆಯೊಳಗೆ ಮರಗಳನ್ನು ತೆರವು ಮಾಡುವಂತೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬಿದ್ದ ಕೊಂಬೆಗಳನ್ನು ಸಾಗಿಸಲು ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಬಳಸಿಕೊಂಡು ದೂರು ಬಂದ ಕೂಡಲೇ ಕಾರ್ಯಾಚರಣೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಲಾಗಿದೆ.
Advertisement