ಆಧುನಿಕ ಯುಗದಲ್ಲೂ ಮೌಢ್ಯ ದುರದೃಷ್ಟಕರ: ನಾಡೋಜ ಎಂ.ಎಚ್. ಕೃಷ್ಣಯ್ಯ

ಆಧುನಿಕ ಯುಗದಲ್ಲೂ ಮಾಟ, ಮಂತ್ರದಂಥ ಮೂಢನಂಬಿಕೆಗಳು ನಮ್ಮ ಜತೆಯಲ್ಲಿಯೋ ಹಾಸುಹೊಕ್ಕಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಎಂ.ಎಚ್. ಕೃಷ್ಣಯ್ಯ ವಿಷಾದ ವ್ಯಕ್ತಪಡಿಸಿದರು...
ಹಿರಿಯ ಸಾಹಿತಿ ನಾಡೋಜ ಎಂ.ಎಚ್. ಕೃಷ್ಣಯ್ಯ
ಹಿರಿಯ ಸಾಹಿತಿ ನಾಡೋಜ ಎಂ.ಎಚ್. ಕೃಷ್ಣಯ್ಯ

ಬೆಂಗಳೂರು: ಆಧುನಿಕ ಯುಗದಲ್ಲೂ ಮಾಟ, ಮಂತ್ರದಂಥ ಮೂಢನಂಬಿಕೆಗಳು ನಮ್ಮ ಜತೆಯಲ್ಲಿಯೋ ಹಾಸುಹೊಕ್ಕಾಗಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹಿರಿಯ ಸಾಹಿತಿ ನಾಡೋಜ ಎಂ.ಎಚ್. ಕೃಷ್ಣಯ್ಯ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆಯ 165ನೇ ಕಾರ್ಯಕ್ರಮದಲ್ಲಿ ್ವರು ತಿಂಗಳ ಅತಿತಿಯಾಗಿ ಮಾತನಾಡಿ, ಈ ವಿಜ್ಞಾನ ಯುಗದಲ್ಲಿ ಬಾಹ್ಯಕಾಶಕ್ಕೆ ಮನುಷ್ಯ ಪ್ರಯಾಣಿಸುವಷ್ಟು ಪ್ರಗತಿ ಕಂಡಿದ್ದೇವೆ.  ಆದರೂ, ಮೂಢನಂಬಿಕೆಗಳು ಅದರ ಜತೆಯಲ್ಲೇ ಹಾಸುಹೊಕ್ಕಾಗಿರುವುದು ದುರದೃಷ್ಟಕರ. ನಂಬಿಕೆಗಳು ನೆಪಮಾತ್ರವಷ್ಟೇ. ಜನರು ಒಂದಲ್ಲ ಒಂದು ರೀತಿ ನಂಬುತ್ತಿರುವ `ಸ್ವರ್ಗನರಕ'ದ ಕಲ್ಪನೆಗಳ ಹಾಗೆ, ಮಾಟಮಂತ್ರದ ಕಲ್ಪನೆಗಳನ್ನೂ ನಂಬುತ್ತಿದ್ದಾರೆ.

ಮೋಸ ಹೋಗುವ ಜನರು ಇರುವವರೆಗೂ ಈ ಮೂಢನಂಬಿಕೆಗಳು ಅಸ್ತಿತ್ವದಲ್ಲಿರುತ್ತವೆ ಎಂದು ನೊಂದು ನುಡಿದರು. ಭಯದಲ್ಲಿ ಧರ್ಮ ಹುಟ್ಟುತ್ತದೆ. ನೋವು, ಆ ಧರ್ಮದ ಹುಟ್ಟಿಗೆ ಕಾರಣವಾಗುತ್ತದೆ. ಆದರೆ ಅಂತಿಮವಾಗಿ ಬದುಕಿಗಿಂತ ದೊಡ್ಡದು ಯಾವುದೂ ಇಲ್ಲ ಎನ್ನುವುದೇ ಶ್ರೇಷ್ಠ ಎನಿಸಿಕೊಳ್ಳುತ್ತದೆ. ಇದು ಕ್ಷಣಿಕ ಕಾಲದ ಜೀವನ. ಇಲ್ಲಿ ನಾವು ನೆನಪು ಮಾತ್ರ. ನಾವು ಬಿಟ್ಟು ಹೋಗುವ ಒಳ್ಳೆಯ ಕೆಲಸಗಳು ಮಾತ್ರ ಜೀವಂತಿಕೆಯಲ್ಲಿರುತ್ತವೆ. ಹೀಗಾಗಿ ನಮ್ಮ ಜೀವಿತಾವಧಿಯಲ್ಲಿ ಮುಂದಿನ ತಲೆಮಾರಿಗೆ ಒಳ್ಳೆಯದನ್ನು ಬಿಟ್ಟು ಹೋಗುವ ಕೆಲಸ ಎಲ್ಲರಿಂದಲೂ ಆಗಬೇಕೆಂದರು.

ಜೀವನದಲ್ಲಿ ಸಾಹಿತ್ಯ ಪ್ರಭಾವ: ಕಾರಂತರು, ಕುವೆಂಪು, ಕಾರ್ಲ್ ಮಾರ್ಕ್ಸ್  ಮತ್ತಿತರರ ಕೃತಿಗಳು ನನ್ನ ವೈಯಕ್ತಿಕ ಹಾಗೂ ಸಾಹಿತ್ಯಿಕ ಜೀವನದಲ್ಲಿ ಅಪಾರ ಪ್ರಭಾವ ಬೀರಿವೆ. ಚಿಕ್ಕವಯಸ್ಸಿನಲ್ಲಿದ್ದಾಗ ಮೊಟ್ಟ ಮೊದಲ ಬಾರಿಗೆ 25 ಆಣೆಗೆ `ಕಾರಂತರ ಬಾಲಪ್ರಪಂಚ' ಕೃತಿಯನ್ನು ಹಳೇ ಪೇಪರ್ ಕೊಂಡೊಯ್ಯುವವನಿಂದ ಖರೀದಿಸಿದ್ದೆ. ಆ ಕೃತಿ ನನ್ನ ಜೀವನದ ದಾರಿಗೆ ನೆರವಾಯಿತು ಎಂದೂ ತಮ್ಮ ಮನದಾಳದ ಮಾತುಗಳನ್ನು ಬಿಡಿಸಿಟ್ಟರು.

ಪುಸ್ತಕಗಳು ಮನೆತುಂಬಿದ್ದವು:
ಪತ್ನಿ ಸಹನಾಶೀಲೆ. ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಲು ಅವರು ಪರೋಕ್ಷವಾಗಿ ನೆರವಾದವಳು. ಮೂವರು ಮಕ್ಕಳ (ಕೊನೆ ಮಗ ತೀರಿಕೊಂಡ) ವಿದ್ಯಾಭ್ಯಾಸ, ಜೀವನ ಎಲ್ಲವನ್ನೂ ಅಚ್ಚುಕಟ್ಟಾಗಿ ಆಕೆಯೇ ನಿಭಾಯಿಸುತ್ತಿದ್ದಳು. ಎಲ್ಲಕ್ಕಿಂತ ಮಿಗಿಲಾಗಿ ಆಕೆ ಎಂದೂ `ನನಗೆ ಸೀರೆ ಬೇಕು ಅಥವಾ ಒಡವೆ ಬೇಕೆಂದು' ಕೇಳಲಿಲ್ಲ. ಅದರ ಫಲವಾಗಿ ಅಪಾರ ಪುಸ್ತಕ ಭಂಡಾರವೇ ನನ್ನ ಮನೆ ತುಂಬಿದವು ಎಂದು ಕೃಷ್ಣಯ್ಯನವರು ಪತ್ನಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ ವೇದಿಕೆಯಲ್ಲಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com