ಹೋಟೆಲ್ ಸಿಬ್ಬಂದಿ ಕತ್ತು ಕುಯ್ದು ಕೊಲೆ

ನಗರದ ಕಪಾಲಿ ಚಿತ್ರಮಂದಿರ ಬಳಿ ಇರುವ ಕೋಳಿ ಮನೆ ಹೋಟೆಲ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನೊಬ್ಬ ಸಹ ಕಾರ್ಮಿಕನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಕಪಾಲಿ ಚಿತ್ರಮಂದಿರ ಬಳಿ ಇರುವ ಕೋಳಿ ಮನೆ ಹೋಟೆಲ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕನೊಬ್ಬ ಸಹ ಕಾರ್ಮಿಕನನ್ನು ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿದ್ದಾನೆ.
 ಕೆ.ಆರ್.ಪೇಟೆ ಮೂಲದ ನಂಜೇಗೌಡ(62) ಕೊಲೆಯಾದವರು. ಕೃತ್ಯ ಎಸಗಿದ ಆರೋಪಿ ರಮೇಶ್(25) ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶ್ರೀನಿವಾಸ್ ಎಂಬುವರ ಮಾಲೀಕತ್ವದ ಕೋಳಿ ಮನೆ ಹೋಟೆಲ್‍ಗೆ ಕೃಷ್ಣಪ್ಪ ಎಂಬುವರು ಕ್ಯಾಷಿಯರ್ ಆಗಿದ್ದರು. ನಂಜೇಗೌಡ ಹಾಗೂ ರವಿ ಎಂಬುವರು ಸಪ್ಲೈಯರ್ ಕಂ ಕ್ಲೀನರ್ ಆಗಿದ್ದರು. 4 ವರ್ಷದಿಂದ ಹೋಟೆಲ್‍ನಲ್ಲಿ ಕೆಲಸಕ್ಕಿದ್ದ ನಂಜೇಗೌಡ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೋಟೆಲ್‍ನಲ್ಲಿ ಕೆಲಸ ಮಾಡಿ, ಬಳಿಕ ಹೊಟೇಲ್ ಮುಂಭಾಗದಲ್ಲೇ ಬಜ್ಜಿ ಬೊಂಡ ಮಾಡಿ ಮಾರಾಟ ಮಾಡುತ್ತಿದ್ದ.

ರವಿ ಹಾಗೂ ನಂಜೇಗೌಡ ಇಬ್ಬರು ರಾತ್ರಿ ಹೋಟೆಲ್‍ನಲ್ಲಿ ತಂಗುತ್ತಿದ್ದರು. ಮೂರು ದಿನಗಳ ಹಿಂದಷ್ಟೇ ಆರೋಪಿ ರಮೇಶ್ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದ. ಆತ ಕೂಡಾ ರಾತ್ರಿ ಅಲ್ಲೇ ಮಲಗುತ್ತಿದ್ದ. ಆದರೆ, ರಮೇಶ್ ಹಾಗೂ ನಂಜೇಗೌಡರ ನಡುವೆ ಮೂರು ದಿನಗಳಿಂದ ಸಣ್ಣ ಪುಟ್ಟ ವಿಚಾರಕ್ಕೆ ಪ್ರತಿನಿತ್ಯ ಜಗಳವಾಗುತ್ತಿತ್ತು. ಇದರಿಂದಾಗಿ ರಮೇಶ್ ಕುಪಿತಗೊಂಡಿದ್ದ.

ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ರವಿ ಶೌಚಾಲಯಕ್ಕೆ ತೆರಳಿದ್ದ. ಈ ವೇಳೆ ಎಚ್ಚರಗೊಂಡ ರಮೇಶ್, ಈರುಳ್ಳಿ ಕತ್ತರಿಸುವ ಚಾಕುವಿನಿಂದ ಮಲಗಿದ್ದ ನಂಜೇಗೌಡನ ಕತ್ತು ಕೊಯ್ದು ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಂಜೇಗೌಡರನ್ನು ಕಂಡ ರವಿ, ಕೂಗಿಕೊಂಡು ಹೊರ ಬಂದಿದ್ದು, ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಲೀಕರಿಗೆ ತಿಳಿಸಿದ್ದಾನೆ. ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಡಿಸಿಪಿ ಲಾಬೂರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com