ಬೆಂಗಳೂರು: ಚರ್ಚ್ಸ್ಟ್ರೀಟ್ ಬಾಂಬ್ ಸ್ಪೋಟ ಪ್ರಕರಣದ ತನಿಖೆಯ ಜವಾಬ್ದಾರಿ ವಹಿಸಿಕೊಂಡಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹೈದ್ರಾಬಾದ್ ಘಟಕದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಗುರುವಾರ ಬೆಳಗ್ಗೆ ಎನ್ಐಎ ತಂಡದ ಅಧಿಕಾರಿಗಳು, ಇನ್ಫೆಂಟ್ರಿ ರಸ್ತೆಯಲ್ಲಿರುವ ಕಮಿಷನರ್ ಕಚೇರಿಗೆ ತೆರಳಿ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರಕರಣ ಕುರಿತು ಮಾಡಿತಿ ಪಡೆದರು. ಪ್ರಕರಣ ತನಿಖೆ ನಡೆಸಿದ ಸ್ಥಳೀಯ ಪೊಲೀಸರಿಂದ ಎಲ್ಲಾ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆದರು. `ಭೇಟಿ ಮಾಡಿದ ಅಧಿಕಾರಿಗಳಿಗೆ ಪ್ರಕರಣದ ಬಗ್ಗೆ
ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಇದುವರೆಗೂ ನಡೆದ ತನಿಖೆಯಲ್ಲಿ ಸಿಕ್ಕ ಸುಳಿವುಗಳ ಬಗ್ಗೆ ಅವರಿಗೆ ವಿವರಿಸಲಾಗಿದೆ.ಎನ್ಐಎ ತನಿಖೆ ವೇಳೆ ಸ್ಥಳೀಯ ಪೊಲೀಸರಿಂದ ತನಿಖೆಗೆ ಅಗತ್ಯವಾದ ನೆರವು ನೀಡುತ್ತೇವೆ' ಎಂದು ಎಂ.ಎನ್.ರೆಡ್ಡಿ ತಿಳಿಸಿದರು.
2014ರ ಡಿ.28ರ ರಾತ್ರಿ ಚರ್ಚ್ಸ್ಟ್ರೀಟ್ನಲ್ಲಿ ಬಾಂಬ್ ಸ್ಪೋಟ ಸಂಭವಿಸಿತ್ತು. ಘಟನೆಯಲ್ಲಿ ಚೆನ್ನೈನ ಭವಾನಿ ಎಂಬಾಕೆ ಮೃತಪಟ್ಟು, ಈಕೆ ಸಂಬಂಧಿ ಕಾರ್ತಿಕ್ ಸೇರಿದಂತೆ ಐವರು ಗಾಯ ಗೊಂಡಿದ್ದರು. ಸ್ಥಳೀಯ ಪೊಲೀಸರು ಆರೋಪಿಗಳ ಕುರಿತು ಸುಳಿವು ಪತ್ತೆಹಚ್ಚುವಲ್ಲಿ ವಿಫಲರಾದ್ದರು.. ಹೀಗಾಗಿ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸಲು ರಾಜ್ಯ ಗೃಹ ಇಲಾಖೆ ಕೋರಿತ್ತು. ಕೇಂದ್ರ ಗೃಹ ಸಚಿವಾಲಯದ ನಿರ್ದೇಶನ ಮೇರೆಗೆ ಚರ್ಚ್ ಸ್ಟ್ರೀಟ್ ಸ್ಪೋಟ ಪ್ರಕರಣದ ತನಿಖೆಯನ್ನು ಬುಧವಾರವಷ್ಟೇ ಎನ್ಐಎ ವಹಿಸಿಕೊಂಡಿದೆ.
Advertisement