ಬೆಂಗಳೂರು: ಗಾಂಧೀಜಿ ಹೇಳಿದ ಕರ್ಮಭೂಮಿ ಎನ್ನುವ ತತ್ವ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಬರಲೇ ಇಲ್ಲ ಎಂದು ರಾಜ್ಯ ಸಭಾ ಮಾಜಿ ಸದಸ್ಯ ನಿವೃತ್ತ ನ್ಯಾ. ರಾಮಾಜೋಯಿಸ್ ಹೇಳಿದ್ದಾರೆ. ನಗರದ ನ್ಯಾಷನಲ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಲಕ್ಷ್ಮಿಕಾಂತ್ ವಿ.ಮೊಹರೀರ ರಚಿಸಿರುವ ಸಂಸ್ಕೃತ ತಜ್ಞ ಭಾರತೀಯಶಾಸ್ತ್ರಜ್ಞ ಪ್ರೊ.ಎಂ.ಕೆ ಶ್ರೀಧರ್ ಎಂಬ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು. ಕರ್ಮಭೂಮಿ ಎನ್ನುವ ಕಲ್ಪನೆಯನ್ನು ಗಾಂಧೀಜಿ ಅವರು ಕೃತಿಯೊಂದರಲ್ಲಿ ಹೇಳಿದ್ದಾರೆ. ಅಂದರೆ ನಮ್ಮ ದೇಶ ಕರ್ತವ್ಯ ಆಧಾರಿತ ವ್ಯವಸ್ಥೆಯ ದೇಶ ಎಂದು ಪ್ರತಿಪಾದಿಸಿದ್ದರು. ಆದರೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಈ ತತ್ವಗಳು ಬರಲೇ ಇಲ್ಲ ಎಂದು ರಾಮಾಜೋಯಿಸ್ ಬೇಸರ ವ್ಯಕ್ತ ಪಡಿಸಿದರು.
ಸಂಸ್ಕೃತದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಸಂಸ್ಕೃತ ವಿವಿ ಕುಲ ಸಚಿವ ಪ್ರೊ. ಎಂ.ಕೆ ಶ್ರೀಧರ್ ಕುರಿತ ಪುಸ್ತಕ ನಿಜಕ್ಕೂ ಅರ್ಥಪೂರ್ಣವಾಗಿದೆ. ಇದರಿಂದ ಪ್ರೇರಣೆ ಉತ್ತೇಜನ ಸಿಗುತ್ತದೆ. ಕಲಿತ ಜ್ಞಾನವನ್ನು ಮುಂದಿನ ಪೀಳಿಗೆಗೆ ಪ್ರಸಾರ ಮಾಡುವುದಕ್ಕೆ ಈ ಕೃತಿ ಹೆಚ್ಚು ನೆರವಾಗಲಿದೆ.
ಅದೇ ರೀತಿ ತತ್ವಗಳನ್ನು ಸಾರುವ ಸಂಸ್ಕೃತ ಶ್ಲೋಕಗಳನ್ನು ಅಲ್ಲಲ್ಲಿ ಹಾಕಲಾಗಿದೆ. ಇದು ಯಾರಿಗೂ ಗೊತ್ತಿರಲಿಲ್ಲ. ಅದನ್ನು ಪುಸ್ತಕ ರೂಪದಲ್ಲಿ ರಚಿಸಿ ಎಲ್ಲರಿಗೂ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ , ಸಂವಿಧಾನದ ಮೂಲ ಪ್ರತಿಗಳಲ್ಲಿ ರಾಮಾಯಣ ಮತ್ತು ಮಹಾಭಾರತದ ಪ್ರಸ್ತಾಪಗಳಿದ್ದು, ಈ ಪ್ರತಿಗಳು ನನ್ನ ಬಳಿ ಇವೆ. ಇದು ಎಷ್ಟೋ ಜನರಿಗೆ ಗೊತ್ತಿಲ್ಲ. ಆದ್ದರಿಂದ ಅದನ್ನು ಪುಸ್ತಕ ರೂಪದಲ್ಲಿ ಹೊರತರಬೇಕು. ಇದರಿಂದ ಸಂವಿಧಾನ ರಚನೆಗೂ ಮುನ್ನವೇ ರಾಮಾಯಣ ಮಹಭಾರತದ ಮೂಲಕ, ನಮ್ಮ ಸಂಸ್ಕೃತಿಯನ್ನು ಹೆಮ್ಮೆಯಿಂದ ದಾಖಲಿಸಲಾಗಿದೆ ಎಂಬುದು ತಿಳಿಯುತ್ತದೆ ಎಂದರು.
ನ್ಯಾಷನಲ್ ಕಾಲೇಜು ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಅಧ್ಯಕ್ಷ ಡಾ.ಎ.ಎಚ್ ರಾಮಾರಾವ್, ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ ಕುಲ ಸಚಿವ ಪ್ರೊ. ಎಂ.ಕೆ ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Advertisement