ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ಮಾರ್ಟ್ ಸಿಟಿ ಪರಿಕಲ್ಪನೆ ದೇಶಾದ್ಯಂತ ಬಡಜನರ ಗುಳೆ ಹೆಚ್ಚಲು ಕಾರಣವಾಗಲಿದೆ ಎಂದು ರಾಜ್ಯ ಐಟಿ-ಬಿಟಿ ಸಚಿವ ಎಸ್.ಆರ್. ಪಾಟೀಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಐಟಿಇ ಬಿಜ್ನ ೧೮ನೇ ಆವೃತ್ತಿಯ ವೇಳಾಪಟ್ಟಿಯನ್ನು ಶುಕ್ರವಾರ ಇಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನ ಸಂಕಷ್ಟದಲ್ಲಿದ್ದಾರೆ. ಅವರ ಪ್ರಮುಖ ವೃತ್ತಿಯಾದ ಕೃಷಿ ಕ್ಷೇತ್ರ ನಿರ್ಲಕ್ಷ್ಯಕ್ಕೆ ಸಿಲುಕಿದೆ. ಇದರಿಂದಾಗಿ ನಗರದತ್ತ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ, ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂಥ ಸ್ಮಾರ್ಟ್ ವಿಲೇಜ್ನಂಥ ಪರಿಕಲ್ಪನೆ ಜಾರಿಗೊಳಿಸುವುದನ್ನು ಬಿಟ್ಟು ಸ್ಮಾರ್ಟ್ ಸಿಟಿ ಘೋಷಣೆ ಮೂಲಕ ನಗರ ಪ್ರದೇಶದತ್ತ ವಲಸೆ ಹೆಚ್ಚುವ ಪರಿಸ್ಥಿತಿಗೆ ಪ್ರಧಾನಿ ಕಾರಣರಾಗಲಿದ್ದಾರೆ ಎಂದು ಆರೋಪಿಸಿದರು.
ದೇಶದ ಮೊದಲ ಡಿಜಿಟಲ್ ಗ್ರಾಮವಾಗಿ ನನ್ನ ಹುಟ್ಟೂರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಂಡಿ ಹೆಸರಲಾಗಲಿದೆ. ಇನ್ನೆರಡು ತಿಂಗಳಲ್ಲಿ ಗ್ರಾಮದ ಎಲ್ಲಾ ೨,೦೦೦ ಕುಟುಂಬಗಳು ಉಚಿತ ವೈಫೈ ಪಡೆಯಲಿವೆ. ಇಂಟೆಲ್ ಕಂಪನಿಯ ತಜ್ಞರು ಈ ಕುರಿತು ಗ್ರಾಮಸ್ಥರಿಗೆ ತರಬೇತಿ ನೀಡುತ್ತಿದ್ದಾರೆ. ಗ್ರಾಮಗಳನ್ನು ಎಲ್ಲ ರೀತಿಯಿಂದ ಸ್ವಾವಲಂಬಿಯಾಗಿಸುವ ಇಂಥ ಪ್ರಯತ್ನಗಳಿಗೆ ಆದ್ಯತೆ ನೀಡಲು ಬೆಂಗಳೂರು ಐಟಿಇ ಬಿಜ್ ಮುಂದಾಗಬೇಕು. ಹದಿನೆಂಟನೇ ಆವೃತ್ತಿಯಲ್ಲಿ ಈ ವಿಷಯವನ್ನೂ ಪರಿಗಣಿಸಿ ಎಂದು ಸಲಹೆ ಮಾಡಿದ ಅವರು, ಇದಕ್ಕಾಗಿ ರಾಜ್ಯ ಸರ್ಕಾರ ಬೇರ್ ಫುಟ್ ಐಟಿ (ಬರಿಗಾಲ ಮಾಹಿತಿ ತಂತ್ರಜ್ಞಾನ) ಪರಿಕಲ್ಪನೆಯನ್ನು ಜಾರಿಗೊಳಿಸಲಿದೆ ಎಂದು ಹೇಳಿದರು.
ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಗ್ರಾಮೀಣ ಪ್ರದೇಶಗಳ ಅಭಿವೃದಿಟಛಿಗೆ ಬಳಸುವ ಮೂಲಕ ಸ್ಮಾರ್ಟ್ ವಿಲ್ಲೇಜ್ ಅನ್ನು ಜಾರಿಗೊಳಿಸಲು ಪ್ರಧಾನಿ ಮೋದಿ ಮುಂದಾಗಬೇಕು ಎಂದು ಸಲಹೆ ಮಾಡಿದ ಸಚಿವ ಪಾಟೀಲ್, ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕನಸೂ ಇದೇ ಆಗಿತ್ತು ಎಂಬುದನ್ನು ನೆನಪಿಸಿದರು. ಸ್ಟಾರ್ಟ್ಅಪ್ನಲ್ಲೂ ರಾಜ್ಯ ಮೊದಲು ಐಟಿ, ಬಿಟಿ ನೀತಿಯನ್ನು ಜಾರಿಗೊಳಿಸಿದ ದೇಶದ ಮೊದಲ ರಾಜ್ಯವಾದ ಕರ್ನಾಟಕ ಈಗ ಸ್ಟಾರ್ಟ್ ಅಪ್ ನೀತಿಯನ್ನೂ ರೂಪಿಸುವ ಮೂಲಕ ದೇಶದ ಜ್ಞಾನರಾಜ್ಯವಾಗಿ ಹೊಮ್ಮಿದೆ. ಈಗ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ಐಟಿ ಉದ್ಯಮವನ್ನು ವಿಸ್ತರಿಸುವ ಯೋಜನೆ ರೂಪಿಸಿದೆ. ನಾಸ್ಕಾಂ ಸಹಯೋಗದೊಂದಿಗೆ ಸ್ಟಾರ್ಟ್ ಅಪ್ ನೀತಿ ಜಾರಿಗೊಳಿಸಲು ನಿಧರಿಸಲಾಗಿದ್ದು, ಒಟ್ಟು ೪೦ ಲಕ್ಷ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಈ ಪೈಕಿ ೧೨ ಲಕ್ಷ ನೇರ ಉದ್ಯೋಗಗಳಿರುತ್ತವೆ.
ಮುಂದಿನ ದಿನಗಳಲ್ಲಿ ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಮೈಸೂರು, ಕೋಲಾರದಂಥ ನಗರಗಳಲ್ಲೂ ಐಟಿ ಉದ್ಯಮಗಳು ಬರಲಿದ್ದು, ಇಡೀ ರಾಜ್ಯವನ್ನು ಇದು ಆವರಿಸಲಿದೆ ಎಂದು ಸಚಿವ ಪಾಟೀಲ್ ವಿವರಿಸಿದರು. ಇದಕ್ಕೂ ಮುನ್ನ ಮಾತನಾಡಿದ ಐಟಿ, ಬಿಟಿ ಮುಖ್ಯ ಕಾರ್ಯದರ್ಶಿ ವಿ.ಮಂಜುಳಾ, ರಾಜ್ಯ ಸರ್ಕಾರ ಈ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳ ವಿವರ ನೀಡಿದರು. ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಉಪಾಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್, ಐಟಿ ಉದ್ಯಮ ಗ್ರಾಮೀಣ ಪ್ರದೇಶಗಳತ್ತ ತೆರಳುವ ಕಾಲ ಸನ್ನಿಹಿತವಾಗಿದ್ದು, ಇದರಿಂದ ದೊಡ್ಡ ಪ್ರಮಾಣದ ಬೆಳವಣಿಗೆ ಸಾಧ್ಯವಾಗಲಿದೆ ಎಂದರು. ಸಮಾರಂಭ ಆಯೋಜಿಸಿದ್ದ ಎಸ್ಟಿಪಿಐ ನಿರ್ದೇಶಕ ಪಿ.ಕೆ. ದಾಸ್, ಎಂ.ಎಂ. ಆಕ್ಟಿವ್ ಸೈಟೆಕ್ ಕಮ್ಯುನಿಕೇಶನ್ ನ ಕಾರ್ಯನಿರ್ವಾಹಕ ನಿರ್ದೇಶಕ ಜಗದೀಶ್ ಪಾಟಂಕರ್, ಐಟಿ ಬಿಟಿ ನಿರ್ದೇಶಕಿ ತನುಶ್ರೀ ದತ್ತಾ ಬೆಂಗಳೂರು ಐಟಿಇ ಬಿಜ್ನ ರೂಪುರೇಷೆಗಳನ್ನು ವಿವರಿಸಿದರು.
ಮೂರು ದಿನ ಸಮ್ಮೇಳನ
ಹದಿನೆಂಟನೇ ಬೆಂಗಳೂರು ಐಟಿಇ ಬಿಜ್ನ ೧೮ನೇ ಸಮ್ಮೇಳನ ಡಿಸೆಂಬರ್ ೮ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದ್ದು, ಇದೇ ಮೊದಲ ಬಾರಿ ಸ್ಟಾರ್ಟ್ ಅಪ್ ಉದ್ಯಮಕ್ಕೆ ಹೆಚ್ಚಿನ ಒತ್ತು ಕೊಡಲಿದೆ. ಜೊತೆಗೆ, ಗ್ರಾಮೀಣ ಪ್ರದೇಶದತ್ತ ಐಟಿ ಉದ್ಯಮ ಹಾಗೂ ರೈತರಿಗೆ ಐಟಿ ಪರಿಹಾರ ಒದಗಿಸುವ ಕುರಿತೂ ಸಮ್ಮೇಳನ ಚರ್ಚೆ ನಡೆಸಲಿದೆ.
Advertisement