ಬೆಂಗಳೂರು: ರಾಜ್ಯ ಸರ್ಕಾರ ಮೂಲಸೌಕರ್ಯದ ಜೊತೆಗೆ 500 ಎಕರೆ ಜಾಗ ನೀಡಿದರೆ ಕರ್ನಾಟಕದಲ್ಲಿಯೂ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆ ಸಚಿವ ಅನಂತಕುಮಾರ್ ಭರವಸೆ ನೀಡಿದರು.
ಕೃಷಿಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ವಿವಿಧೆಡೆ ಸುಮಾರು ರು. 2800 ಕೋಟಿ ವೆಚ್ಚದಲ್ಲಿ 5 ಯೂರಿಯ ಪ್ಯಾಕ್ಟರಿಗಳನ್ನು ಪ್ರಾರಂಭಿಸಲು ಕೇಂದ್ರ ಒಪ್ಪಿಗೆ ಸೂಚಿಸಿದೆ. ರಾಜ್ಯ ಸರ್ಕಾರವೂ ಒಪ್ಪಿದರೆ ಇಲ್ಲಿಯೂ ಕಾರ್ಖಾನೆ ಪಿಸಲಾಗುವುದು ಎಂದು ತಿಳಿಸಿದರು.
ಯೂರಿಯಾ ಉತ್ಪಾದನೆಯನ್ನು ಬೇವುಲೇಪಿತ ಮಾಡಲಾಗಿದ್ದು, ಉತ್ತಮ ಇಳುವರಿಗೆ ಸಹಕಾರಿಯಾಗಿದೆ. ಅಲ್ಲದೆ ಈ ಮೊದಲು ಬಣ್ಣ, ಹೇರ್ಡೈ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಳ್ಳಸಾಗಣೆಯಾಗುತ್ತಿದ್ದ ಯೂರಿಯಾವನ್ನು ಕೇಂದ್ರ ಸರ್ಕಾರ ತಡೆಗಟ್ಟಿದೆ ಎಂದರು.
ದೇಶದಲ್ಲಿ 350 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಿದ್ದು, 275 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಶೇ.100 ಯೂರಿಯಾವನ್ನು ಬೇವು ಲೇಪಿತ ಮಾಡುವ ಉದ್ದೇಶದಿಂದ ಆಮದು ಯೂರಿಯಾಕ್ಕೂ ಬೇವುಲೇಪಿತ ಮಾಡಲಾಗುತ್ತಿದೆ. ಇದಕ್ಕಾಗಿ ವಿಶಾಖಪಟ್ಟಂ, ಕಾಂಡ್ಲಾ ಸೇರಿ 5 ಕಡೆ ಬೇವುಲೇಪಿತ ಯಂತ್ರ ಸ್ಥಾಪಿಸ ಲಾಗುವುದು ಎಂದು ಹೇಳಿದರು.
ಡಿ.5 ವಿಶ್ವ ಮಣ್ಣಿನ ದಿನ: ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನ ಆಚರಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಮಣ್ಣಿನ ತಪಾಸಣೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಅನುದಾನ ನೀಡಲಿದೆ ಎಂದ ಅವರು, ಬೆಂಗಳೂರಿನ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಲು ಸರ್ಕಾರ ಮುಂದಾದರೆ ಶೇ.70ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲು ಸಿದ್ಧವಾಗಿದೆ. ಈ ಯೋಜನೆಯನ್ನು ಸರ್ಕಾರ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ರಾಜ್ಯಮಟ್ಟದಲ್ಲಿ ಕೃಷಿಮೇಳ: ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಕೃಷಿ ಮೇಳ ರಾಜ್ಯದ ಎಲ್ಲ ಭಾಗದಲ್ಲಿಯೂ ರಾಜ್ಯಮಟ್ಟದ ಕೃಷಿಮೇಳ ಆಯೋಜಿಸಬೇಕಾಗಿದೆ. ಇದರಿಂದ ರಾಜ್ಯದ ಪ್ರತಿಯೊಬ್ಬ ರೈತನಿಗೆ ಮಾಹಿತಿ ಸಿಗಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾಲದಿಂದ ಶೂಲಕ್ಕೇರುತ್ತಿರುವ ರೈತರು ಕೃಷಿಯಲ್ಲಿ ಉತ್ತಮ ಜೀವನ ನಡೆಸಲು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶೋಭಾ ಅಶೋಕ್ ಮತ್ತು ಬಸವರಾಜ್ ನಾವಿ ಎಂಬ ರೈತರಿಗೆ ಅತ್ಯುತ್ತಮ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಬಾರ್ಡ್ ಮುಖ್ಯ ಮಹಾ ಪ್ರಬಂಧಕ ಎಂ.ಐ. ಗಣಗಿ, ಕೃಷಿ ವಿವಿ ಕುಲಪತಿ ಡಾ. ಎಚ್. ಶಿವಣ್ಣ, ಎಚ್.ಸಿ. ಆಶಾ ಶೇಷಾದ್ರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತಾಪಿ ವರ್ಗ ಉಪಸ್ಥಿತರಿದ್ದರು.
Advertisement