ರಾಮ ಮಂದಿರ ನಿರ್ಮಾಣವೇ ಸಿಂಘಾಲ್ಗೆ ಶ್ರದ್ದಾಂಜಲಿ: ಚಂದ್ರಕಾಂತಾದೇವಿ
ಬೆಂಗಳೂರು: ಹಿಂದೂಗಳನ್ನು ಒಗ್ಗೂಡಿಸಿ ಸಹಿಷ್ಣುತೆಯಿಂದ ರಾಮ ಮಂದಿರ ನಿರ್ಮಿಸಿ ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಾಲ್ಗೆ ಶ್ರದ್ದಾಂಜಲಿ ಸಲ್ಲಿಸಬೇಕೆಂದು ರಾಜಮಾತಾ ಚಂದ್ರಕಾಂತಾದೇವಿ ಹೇಳಿದರು.
ನಗರದ ಕಿಮ್ಸ್ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ವಿಎಚ್ಪಿ ಹಮ್ಮಿಕೊಂಡಿದ್ದ ಅಶೋಕ್ ಸಿಂಘಾಲ್ ನೆನಪು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಹದ ಕಣಕಣದಲ್ಲಿಯೂ ದೇವರು ಮತ್ತು ಹಿಂದೂ ಧರ್ಮದ ಆರಾಧಕರಾಗಿದ್ದರು. ಹೃದಯದಲ್ಲಿ ರಾಮ ನಾಮ ಜಪ ಮಾಡುತ್ತ ರಾಮಮಂದಿರ ನಿರ್ಮಾಣದ ಕನಸನ್ನು ದೇಶದ ಜನರಲ್ಲಿ ಭಿತ್ತಿದ್ದರು ಎಂದು ಹೇಳಿದರು.
ಆಂಜನೇಯನಿಗೆ ಮೊದಲಬಾರಿ ಶ್ರೀರಾಮನ ದರ್ಶನವಾಗಿದ್ದ ಕಿಷ್ಕಿಂದೆ (ಈಗಿನ ಹಂಪಿ)ಯನ್ನು ಒಮ್ಮೆ ನೋಡಬೇಕೆಂದುಹಾತೊರೆಯುತ್ತಿದ್ದರು. ಧರ್ಮದಲ್ಲಿದ್ದ ಕೆಲ ಅನಿಷ್ಟಗಳಾದ ಜಾತಿ ತಾರತಮ್ಯ, ಅಸ್ಪೃಶ್ಯತೆ ಹೋಗಲಾಡಿಸಿ ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಜೀವನ ಪರ್ಯಂತ ಹೋರಾಟ ಮಾಡಿದರು ಎಂದರು.
ಪರಿಷತ್ನ ಮಾಜಿ ಕೇಂದ್ರಿಯ ಉಪಾಧ್ಯಕ್ಷ ವೈ.ಕೆ.ರಾಘವೇಂದ್ರ ರಾವ್ ಮಾತನಾಡಿ, ವಿಎಚ್ಪಿ ಮೂಲಕ ದೇಶದಲ್ಲಿ ಹರಿದು ಹಂಚಿಹೋಗಿದ್ದ ಸಾಧು, ಸಂತರನ್ನು ಒಂದೇ ವೇದಿಕೆಯಡಿ ಕರೆತಂದು ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಒಮ್ಮತ ನಿರ್ಣಯವನ್ನು ಸಿಂಘಾಲ್ ಅವರು 1989ರಲ್ಲಿ ಉಡುಪಿಯಲ್ಲಿ ಕೈಗೊಂಡರು. ನಂತರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಪ್ರತಿಗ್ರಾಮದಿಂದ ಇಟ್ಟಿಗೆ ತರಿಸುವ ಚಳವಳಿ ಕೈಗೊಂಡು ಇಟ್ಟಿಗೆ ಸಂಗ್ರಹಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿ.ನಾಗರಾಜ್, ಬೇಲಿಮಠದ ಶಿವರುದ್ರ ಮಹಾ ಸ್ವಾಮೀಜಿ, ಭಾಗವಹಿಸಿದ್ದರು.