ಬೆಂಗಳೂರು : ಈ ಚಾಣಾಕ್ಷ ಕಳವು ಮಾಡಲು ಬಳಸುತ್ತಿದ್ದದ್ದು ಕೇವಲ ಕಾಗದ ಚೂರುಗಳನ್ನು! ಹೌದು. ಎಲ್ಲರೂ ಬಾಗಿಲು, ಕಿಟಕಿ ಮುರಿಯಲು ಕಬ್ಬಿಣದ ಸಲಕರಣೆ, ಚಾಕು ಬಳಸುತ್ತಿದ್ದರೆ, ಈ ಚಾಣಾಕ್ಷ ಚೋರ ಮಾತ್ರ ಕಾಗದ ಚೂರುಗಳನ್ನು ಬಳಸುತ್ತಿದ್ದ.
ಈತ ಮಾಡುತ್ತಿದ್ದದ್ದು ಇಷ್ಟೇ. ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಅವರು ಹಾಕಿರುವ ಮನೆಗಳನ್ನು ಗುರುತಿಸಿ ಅವರು ಹಾಕಿರುತ್ತಿದ್ದ ಬಾಗಿಲಿಗೆ ಕಾಗದದ ಚೂರುಗಳನ್ನು ಸಿಕ್ಕಿಸುತ್ತಿದ್ದ, ಮರುದಿನ ಆ ಕಾಗದ ಚೂರಿನ ಬಗ್ಗೆ ನಿಗಾ ವಹಿಸುತ್ತಿದ್ದ. ಈ ಕಾಗದ ಚೂರು ನೆಲಕ್ಕೆ ಬಿದ್ದಿದ್ದರೇ ಆ ಮನೆಯ ಸದಸ್ಯರು ಇದ್ದಾರೆ ಎಂದರ್ಥ, ಒಂದು ವೇಳೆ ಆ ಕಾಗದದ ಚೂರು ಬೀಳದಿದ್ದರೇ ಯಾರೂ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಇಂಥಹ ಚಾಣಾಕ್ಷ ಈಗ ಬಸವನಗುಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತ ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ. ಈ ಬಗ್ಗೆ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಕುಮಾರ್, ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ಪ್ರಕಾಶ್ ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಆರೋಪಿಯೂ ಸೆರೆ
ಮತ್ತೊಂದು ಪ್ರಕರಣದಲ್ಲಿ ಬಿಟಿಎಂ 1 ನೇ ಹಂತದ ನಿವಾಸಿ ನಾಗೇಶ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು ರು. 4.60 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಮೈಕೋಲೇ ಔಟ್ ವ್ಯಕ್ತಿಯೋಬ್ಬರ ಬಳಿ ಕಾರು ತೊಳೆಯುವ ಕೆಲಸ ಮಾಡುತ್ತಿದ್ದ ಆರೋಪಿ ನಾಗೇಶ್, ಇದೇ ಮೊದಲ ಬಾರಿಗೆ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾನೆ ಎಂದು ಡಿಸಿಪಿ ಹೇಳಿದರು.
ಕೆಲ ದಿನಗಳ ಹಿಂದೆ ತಮ್ಮ ನೆರೆ ಮನೆಗೆ ಬೀಗ ಹಾಕಿರುವು ದನ್ನು ಗಮನಿಸಿದ ನಾಗೇಶ್, ಮಹಡಿ ಮೇಲಿನ ಕಿಟಕಿ ತೆರೆದು ಒಳ ಹೋಗಿ ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ದೋಚಿದ್ದ. ಈ ಬಗ್ಗೆ ದಾಖಲಾಗಿದ್ದ ಪ್ರಕರಣದ ಜಾಡು ಹಿಡಿದು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
Advertisement